Thursday, March 29, 2012

ಸೌಜನ್ಯ ಮತ್ತು ಸಹಜತೆ


(ಈ ಅಂಕಣದಲ್ಲಿ ನಾನು ಹಂಚಿಕೊಳ್ಳಲು ಬಯಸುವ ಸಂಗತಿಗಳು ನನ್ನನ್ನು ಎಂದಿನಿಂದಲೂ ಕಾಡಿವೆ, ಈಗಲೂ ಕಾಡುತ್ತಿವೆ. ಈ ಇಳಿವಯಸ್ಸಿನಲ್ಲಿ, ಇವುಗಳನ್ನು ನಿಮ್ಮೊಂದಿಗೆ ಹೇಳಿಕೊಳ್ಳುವ ಹಂಬಲ ನನ್ನದು. ಆಲೋಚನೆ ಎನ್ನುವುದು ಬದಲಾವಣೆಯ ಮೊದಲ ಹೆಜ್ಜೆ. ಇಲ್ಲಿ ಸವೆದುಹೋದ ಗಾಡಿಜಾಡುಗಳು ಅಪಾಯಕರ. ಈ ಬರಹಗಳಲ್ಲಿ ಉತ್ತರಗಳಿಗಿಂತ ಹೆಚ್ಚಾಗಿ ಪ್ರಶ್ನೆಗಳು ಇರುತ್ತವೆ. ಅವು ನನ್ನ ಪ್ರಶ್ನೆಗಳು ಮಾತ್ರವಲ್ಲ, ನಿಮ್ಮವೂ ಹೌದು. ನಾನು ಉತ್ತರಗಳನ್ನು ಕೊಡಬಲ್ಲೆ, ಅವೇ ಸರಿಯಾದ ಉತ್ತರಗಳುಎಂಬ ಅಹಂಕಾರ ನನಗಿಲ್ಲ. ಹಾಗೆ ನೋಡಿದರೆ, ಯಾರೂ ಯಾರಿಗೂ ದಾರಿ ತೋರಿಸುವುದು ಸಾಧ್ಯವಿಲ್ಲ, ಸರಿಯಲ್ಲ. ಆದರೆ, ಪ್ರಶ್ನೆಗಳನ್ನು ಕೇಳುವುದೆಂದರೆ, ಮನಸ್ಸು ಎಂಬ ತಿಳಿಗೊಳದಲ್ಲಿ ಕಲ್ಲುಗಳನ್ನು ಎಸೆದ ಹಾಗೆ. ನಿಮ್ಮ ಮನಸ್ಸಿನಲ್ಲಿ ಏಳುವ ಅಲೆಗಳು ನಿಮ್ಮವೇ ಆಗಿರುತ್ತವೆ. ಜೀವನದಲ್ಲಿ, ನಮಗೇ ತಿಳಿಯದಂತೆ ನಮ್ಮ ನಡವಳಿಕೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ಕೆಲವು ಸಂಗತಿಗಳನ್ನು ಎದುರಿಸದೆ ಬೇರೆ ದಾರಿಯಿಲ್ಲ. ನಾನು ಸಾಹಿತ್ಯದ ವಿದ್ಯಾರ್ಥಿಯಾದರೂ ಈ ಬರಹಗಳ ಹಿಂದೆ ಇರುವ ಪ್ರೇರಣೆ ಬೇರೆ ಬಗೆಯದು.)  


ಸಹಜತೆ ಮತ್ತು ಸೌಜನ್ಯ
 
ನಾನು, ನೀವು ಮತ್ತು ನಮ್ಮ ನೆರೆಹೊರೆಯವರು ಇವರೆಲ್ಲರೂ ಸೇರಿದ ಹಾಗೆ, ಯಾರು ಸಹಜವಾದವರು, ಯಾರು ಸಜ್ಜನರು? ಇವೆರಡೂ ಒಂದೆಯೋ ಬೇರೆ ಬೇರೆಯೋ? ಸಜ್ಜನ ಮತ್ತು ದುರ್ಜನ ಎಂಬ ಗುಂಪುಗಳ ಆಚೆಗೆ, ಸಹಜವಾಗಿ ವರ್ತಿಸುವವರು ಎಂಬ ಮೂರನೆಯ ಕೆಟಗರಿ ಇದೆಯೇ. ಕೊನೆಗೂ, ನಾವು ಒಳ್ಳೆಯವರೋ ಕೆಟ್ಟವರೋ ಎಂಬ ಪ್ರಶ್ನೆಗೆ ನಾವೇ ಕೊಟ್ಟುಕೊಳ್ಳುವ ಉತ್ತರ ಯಾವುದು? ಯಾರಾದರೂ ಸರಿಯೇ, ಅವರು ಯಾವಾಗಲೂ ಕೆಟ್ಟವರಾಗಿ ಇರುತ್ತಾರೆಯೇ ಅಥವಾ ಯಾವಾಗಲೂ ಒಳ್ಳೆಯವರಾಗಿಯೇ ಇರುತ್ತಾರೆಯೇ? ಕೊನೆಗೂ ಒಳ್ಳೆಯದು, ಕೆಟ್ಟದ್ದು ಎಂದರೆ ಏನು? ಅಂತಹ ಪರಿಕಲ್ಪನೆಗಳನ್ನು ಯಾರು ಯಾಕೆ ರೂಪಿಸಿದ್ದಾರೆ?
 ಇವು ಹಲವು ದಶಕಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು. ಏಕೆಂದರೆ ನಾವು ಬದುಕುವ ಬಗೆ, ಸುಖ-ದುಃಖಗಳನ್ನು ಅನುಭವಿಸುವ ರೀತಿ, ನಮ್ಮ ಬಂಧುಗಳ-ಗೆಳೆಯರ ಬೆಲೆಕಟ್ಟುವ ವಿಧಾನ ಎಲ್ಲದರ ಮೇಲೆಯೂ ಇವುಗಳಿಗೆ ನಾವು ಕೊಟ್ಟುಕೊಂಡಿರುವ ಉತ್ತರಗಳು ಪರಿಣಾಮ ಬೀರುತ್ತವೆ.
 ನಾವೆಲ್ಲರೂ ಮನುಷ್ಯರು. ಒಂದು ನೆಲೆಯಲ್ಲಿ ನಾವೆಲ್ಲರೂ ಪ್ರಾಣಿಗಳು. ಪ್ರಾಣಿಗಳಿಗಿಂತ ಉತ್ತಮರು ಎಂದು ನಾವೇ ಹೇಳಿಕೊಂಡರೂ ನಮ್ಮನ್ನು ತುಂಬಿಕೊಂಡಿರುವ ಕ್ರೌರ್ಯ, ಕೋಪ, ದ್ವೇಷ ಹೊಟ್ಟೆಕಿಚ್ಚುಗಳನ್ನು ಗಮನಿಸಿದಾಗ ಇದು ನಿಜವೆಂದು ತೋರುವುದಿಲ್ಲ. ಮೇಲುಮೇಲಿನ, ನಯನಾಜೂಕಿನ ಆವರಣದ ಆಳದಲ್ಲಿ ಮನೆಮಾಡಿರುವ ಸಣ್ಣತನಗಳನ್ನು ನಾವೇ ನೋಡಿಕೊಂಡಾಗ, ನಾವು ಎಂಥವರು ಎಂಬ ಪ್ರಶ್ನೆ ನಮ್ಮನ್ನು ಕಾಡತೊಡಗುತ್ತದೆ.
 ನಮಗೆಲ್ಲರಿಗೂ ಬಾಲ್ಯದಿಂದಲೂ ಸೌಜನ್ಯದ, ಸಭ್ಯ ನಡವಳಿಕೆಯ ಪಾಠಗಳನ್ನು ಕಲಿಸುತ್ತಾರೆ. ಕುಟುಂಬ, ಶಾಲೆ, ಕಾನೂನು, ಧರ್ಮ, ಗುರು-ಹಿರಿಯರು ಹೀಗೆ ಸಾಮಾಜಿಕ ಎನ್ನಲಾದ ಎಲ್ಲ ಸಂಸ್ಥೆಗಳೂ ಇದನ್ನೇ ಜಪಿಸುತ್ತವೆ, ಹೇರುತ್ತವೆ. ಆದರೆ, ಇದರ ಸಂಗಡವೇ ಹೇಳದೆ ಕಲಿಸಿಸುವ ಪಾಠಗಳೂ ಇರುತ್ತವೆ. ಅದು ಸ್ಪರ್ಧೆಯ, ಸ್ವಾರ್ಥದ, ಆತ್ಮರಕ್ಷಣೆಯ, ಹೇಗಾದರೂ ಮುಂದೆ ಬರಬೇಕು ಎನ್ನುವ ಪಾಠ. ನಮ್ಮೆಲ್ಲರಲ್ಲಿಯೂ ಈ ಎರಡು ಬಗೆಯ ಪಾಠಗಳ ನಡುವೆ ಒಂದು ಬಗೆಯ ತಾಕಲಾಟ ನಡೆದಿರುತ್ತದೆ. ಯಾರು ಯಾವುದನ್ನು ಎಷ್ಟು ಕಲಿಯುತ್ತೇವೆಯೋ ಹೇಳುವುದು ಕಷ್ಟ. ಹಾಗೆ ಕಲಿತಿದ್ದು ಅಳವಡಿಸಿಕೊಂಡಿದ್ದು ನಮ್ಮ ಭಾವನೆಗಳ ಬದುಕು ಮತ್ತು ವಿಚಾರಗಳ ಬದುಕು ಎರಡರ ಮೇಲೆಯೂ ಪ್ರಭಾವ ಬೀರುತ್ತವೆ. ಅದರ ಪರಿಣಾಮ ಕೆಲವೊಮ್ಮೆ ಒಂಟಿತನದ ಕಣ್ಣೀರಿನ ಬದುಕು, ಕೆಲವೊಮ್ಮೆ ಆಕ್ರಮಣಶೀಲವಾದ ವಿಜೃಂಭಣೆಯ ಬದುಕು. ಮತ್ತೆ ಅನೇಕ ಬಾರಿ, ಹೊರನೋಟಕ್ಕೆ ಆರೋಗ್ಯಕರವಾಗಿ ಕಂಡರೂ ಒಳಗೇ ಕಳೆದುಕೊಂಡಿರುವ ಕೊರಗುತ್ತಿರುವ ಬದುಕು.
 ಇದೆಲ್ಲದರ ಹಿಂದೆಯೂ ಸಭ್ಯತೆ ಮತ್ತು ಸಹಜತೆಗಳ ನಡುವಿನ ದ್ವಂದ್ವ ಇದೆಯೆಂದು ನನಗೆ ತೋರುತ್ತದೆ. ಸಹಜವಾದುದೆಲ್ಲವೂ ಕೆಟ್ಟದೂ ಅಲ್ಲ, ಒಳ್ಳೆಯದೂ ಅಲ್ಲ. ಅದು ಎಲ್ಲ ಮನುಷ್ಯರಿಗೆ ಕಲಿಯದೆ, ಕಲಿಸದೆ ಬಂದಿರುವ ಲಕ್ಷಣಗಳ ಮೊತ್ತ. ಹಾಗೆ ಬದುಕಲು ಒಳಗಿನ ಹೊರಗಿನ ಒತ್ತಡಗಳ ಅಗತ್ಯವಿಲ್ಲ. ಅಂತಹ ಸಹಜತೆಯಲ್ಲಿ ಪ್ರೀತಿ, ಸ್ನೇಹ, ಅನುಕಂಪಗಳೂ ಇವೆ, ಸಿಟ್ಟು, ಸೆಡವು, ಸ್ವಾರ್ಥಗಳೂ ಇವೆ. ಒಂದು ಇನ್ನೊಂದಕ್ಕೆ ವಿರುದ್ಧವಲ್ಲ. ಅವು ಸಂದರ್ಭಕ್ಕೆ ಅನುಗುಣವಾಗಿ ಮೂಡಿಮುಳುಗುವ ಸಂಗತಿಗಳು. ಸಹಜವಾಗಿ ಬದುಕುವ ಮನುಷ್ಯನಿಗೆ ಯಾವುದರ ಬಗ್ಗೆಯೂ ಗಿಲ್ಟ್ ಇರುವುದಿಲ್ಲ. ಅಂತಹ ಮನುಷ್ಯ ತನ್ನನ್ನು ತಾನು ಪ್ರೀತಿಸಬಲ್ಲ. ಆದ್ದರಿಂದಲೆ ಇತರರನ್ನೂ ಪ್ರೀತಿಸಬಲ್ಲ. ಅಗತ್ಯ ಬಿದ್ದಾಗ ಜಗಳವಾಡಿದರೂ ಮತ್ತೆ ಒಂದುತನದಲ್ಲಿ ಬೆರೆಯಬಲ್ಲ. ಅನ್ಯರ ಸರಿತಪ್ಪುಗಳನ್ನು ಅರ್ಥ ಮಾಡಿಕೊಳ್ಳಬಲ್ಲ. ಸಹಜವಾಗಿ ತನಗೇ ಅನ್ನಿಸದೆ ಇರುವುದನ್ನು ಅವನು ಯಾರ, ಯಾವುದರ ಒತ್ತಾಯಕ್ಕೂ ಮಾಡಲಾರ, ಮಾಡುವುದಿಲ್ಲ. ಹೀಗೆ ಬದುಕಿದಾಗ ಆತ್ಮಸಂತೋಷಕ್ಕೆ ಅಡ್ಡಿಯಾಗದಂತೆ, ಅನ್ಯರಿಗೂ ಸಾಧ್ಯವಾದಷ್ಟು ಸಂತೋಷ ಕೊಡುವುದು ಸಾಧ್ಯವಾಗುತ್ತದೆ.
 ಆದರೆ, ಸಜ್ಜನಿಕೆಯ ಮಾತು ಬೇರೆ. ಇದು ಹೊರಗಿನಿಂದ ನೀಡಲಾದ ನಡೆನುಡಿಗಳ, ಮಾದರಿಗಳ ಕುರುಡು ಅನುಕರಣೆ. ಅವುಗಳ ಹಿಂದೆ ಇರುವ ತಾತ್ವಿಕತೆಗಳು ಸರಿಯೋ ಅಥವಾ ತಪ್ಪೋ ಎಂದು ಯೋಚಿಸುವ ವ್ಯವಧಾನವಾಗಲೀ ಸ್ವಾತಂತ್ರ್ಯವಾಗಲೀ ಬಹಳ ಜನರಿಗೆ ಇರುವುದಿಲ್ಲ. ಕ್ರಮೇಣ ಈ ಸೌಜನ್ಯವೇ ತಮ್ಮ ಮೇಲೆ ತಾವೇ ಹೇರಿಕೊಂಡ, ಅನ್ಯರಿಂದಲೂ ನಿರೀಕ್ಷಿಸುವ ನೀತಿಸಂಹಿತೆಯಾಗಿ ಬಿಡುತ್ತದೆ. ಸಭ್ಯರ ನಡಾವಳಿ ಎನ್ನುವುದು ಕೇವಲ ಕೃತಕವಾದ ಹುಸಿ ಆಚಾರ-ವಿಚಾರಗಳ ಮೊತ್ತವಾಗುತ್ತದೆ. ಯಾರೂ ಯಾವುದನ್ನೂ ವಿರೋಧಿಸುವುದೂ ಇಲ್ಲ, ಅನುಸರಿಸುವುದೂ ಇಲ್ಲ. ಇಂಥ ಸಮಾಜವು ಹುಸಿಗಳ ಮೇಲೆಯೇ ನಿಂತಿರುತ್ತದೆ. ಎಕ್ಸ್ಕ್ಯೂಸ್ ಮಿ’, ‘ಸಾರಿ’, ‘ಥ್ಯಾಂಕ್ ಯೂ’, ಮುಂತಾದ ಮಾತುಗಳ ಮೆರವಣಿಗೆಯಾಗಿಬಿಡುತ್ತದೆ. ಆಡುವ ಮಾತುಗಳ ಹಿಂದೆ ಪ್ರಾಮಾಣಿಕವಾದ ಭಾವನೆಗಳಾಗಲೀ ವಿಚಾರಗಳಾಗಲೀ ಇಲ್ಲದ ಈ ಸನ್ನಿವೇಶವು ಬಹಳ ಅಪಾಯಕಾರಿ. ಬಸವಣ್ಣನವರ ಸದುವಿನಯವೇ ಸಕಲ ಜಪಂಗಳಯ್ಯಾಎಂಬ ಮಾತಿಗೂ ಈ ನಾಗರಿಕನಡತೆಗೂ ಸಂಬಂಧವಿಲ್ಲ.
 ಹೋಗಲಿ. ಒಬ್ಬ ಮನುಷ್ಯ ನಿಜವಾಗಿಯೂ ಸೌಜನ್ಯದ ಎಲ್ಲ ನೆಲೆಗಳನ್ನೂ ಪ್ರಾಮಾಣಿಕವಾಗಿಯೇ ಕಲಿತಿದ್ದಾನೆ, ಅಳವಡಿಸಿಕೊಂಡಿದ್ದಾನೆ ಎಂದೇ ಇಟ್ಟುಕೊಳ್ಳೋಣ. ಆಗ ಏನಾಗುತ್ತದೆ? ಅವನನ್ನು ಮೆಚ್ಚುವವರೆಷ್ಟು ಜನ, ಪ್ರೀತಿಸುವವರೆಷ್ಟು ಜನ ಅಥವಾ ಬಳಸಿಕೊಂಡು ದೂರವಿಡುವವರೆಷ್ಟು ಜನ? ಈ ಮಾತಿಗೆ ಉತ್ತರ ನಮಗೆ ತಿಳಿದಿರುವ ಅಂತಹ ಮನುಷ್ಯರ ಬಗ್ಗೆ ಆಲೋಚಿಸಿದಾಗ ತಿಳಿಯುತ್ತದೆ. ಅವರಿಗೆ ನಿಜ ಹೇಳುವುದಕ್ಕೂ ಆತಂಕವೇ. ತಮಗೆ ಅನ್ಯಾಯವಾದಾಗ ಪ್ರತಿಭಟಿಸುವುದಕ್ಕೂ ಭಯವೇ. ಸಹಜವಾದ ನಡವಳಿಕೆಯನ್ನು ಸೌಜನ್ಯದ ಫಿಲ್ಟರ್ ಮೂಲಕ ಶೋಧಿಸಿ ಬಳಸುವ ಇವರಿಗೆ ಒಂಟಿತನವೇ ಗತಿ.
  ನಮ್ಮ ನಾಡು ರಾಮನನ್ನು ಗೌರವಿಸುತ್ತದೆ. ಕೃಷ್ಣನನ್ನು ಪ್ರೀತಿಸುತ್ತದೆ. ಇವರಿಬ್ಬರಲ್ಲಿ ಯಾರದು ಸಹಜತೆ, ಯಾರದು ಸೌಜನ್ಯ? ರಾಮನದು, ಸೀತೆಯನ್ನು ಕೂಡ ಕಾಡಿಗೆ ಕಳಿಸುವ ನಿಯಮಬದ್ಧತೆಯಾದರೆ, ಕೃಷ್ಣನದು ಸಂದರ್ಭಕ್ಕೆ ಹೊಂದಿಕೊಳ್ಳುವ ಮಾನವೀಯ ಆಯ್ಕೆಗಳನ್ನು ಮಾಡಿಕೊಳ್ಳುವ ವಿವೇಕ. ಗಾಂಧೀಜಿಯವರು ರಾಮನನ್ನು ನಂಬಿದವರು. ದಕ್ಷಿಣ ಆಫ್ರಿಕಾದಲ್ಲಿ ನಟ್ಟನಡುರಾತ್ರಿಯಲ್ಲಿ, ಪಾಯಖಾನೆಯನ್ನು ತೊಳೆಯಲಿಲ್ಲವೆಂದು, ಕಸ್ತೂರಿ ಬಾ ಅವರನ್ನು ಮನೆಯಿಂದ ಹೊರತಳ್ಳಲು ಅವರಿಗೆ ಸಂಕೋಚವೆನ್ನಿಸಲಿಲ್ಲ. ಇಂಥ ಸನ್ನಿವೇಶದಲ್ಲಿ ನಿಯಮ ನಿಷ್ಠುರತೆಯು ತನ್ನಂತೆ ಅನ್ಯರನ್ನು ಬಗೆಯುವುದಿಲ್ಲ. ಅದು ಸರ್ವಾಧಿಕಾರಕ್ಕೆ ಹಾಕಿದ ಮುಖವಾಡ ಮಾತ್ರ. ಅದು ಕೂಡ ಕಾನೂನಿನ ಹಾಗೆಯೇ, ಸನ್ನಿವೇಶದ ಸಂಕೀರ್ಣತೆಯನ್ನು ಗ್ರಹಿಸದೆ, ಅಕ್ಷರನ್ಯಾಯಕ್ಕೆ ಅಂಟಿಕೊಳ್ಳುತ್ತದೆ. ಇಂಥ ಕಡೆ ಸಜ್ಜನರು ಮೂಕರಾಗುತ್ತಾರೆ ಅಥವಾ ಜಾಣಕುರುಡು ನಟಿಸುತ್ತಾರೆ. ಸಹಜವಾಗಿರುವವರು, ಕೋಪ ತಾಪಗಳಲ್ಲಿ ಕುದಿಯುತ್ತಾರೆ. ದ್ರೌಪದಿಯ ವಸ್ತ್ರಾಪಹರಣವಾಗುವಾಗ, ಬೆಂಕಿಯನ್ನು ತರಿಸಿ ಧರ್ಮರಾಯನ ಕೈಗಳನ್ನು ಸುಟ್ಟುಬಿಡಬೇಕೆನ್ನುವ ಭೀಮನು ಸಹಜವೆನಿಸಿದರೆ, ಉಳಿದ ಪಾಂಡವರು ಸಜ್ಜನರೆನಿಸುತ್ತಾರೆ. "ಈ ನಪುಂಸಕರ ನಡುವೆ ಹುಟ್ಟಿದ ನಾನು ಮೂಗುಳ್ಳವನೇ?", ಎಂದು ಕೊರಗುವ ಭೀಮ ನಮಗೆ ಆತ್ಮೀಯನಾಗುತ್ತಾನೆ.  ಆದ್ದರಿಂದಲೇ ದ್ರೌಪದಿಯು, "ಕಲಿ ಭೀಮನೊಬ್ಬನೆ ಮಿಡುಕುಳ್ಳ ಗಂಡನು.", ಎಂದು ಸತ್ಯಕ್ಕೆ ಕನ್ನಡಿ ಹಿಡಿಯುತ್ತಾಳೆ. 
   ಈ ಸಹಜತೆ ಮತ್ತು ಸೌಜನ್ಯಗಳ ಮಾತು ಕೇವಲ ಮನುಷ್ಯ ಸಂಬಂಧಗಳಿಗೆ ಮಾತ್ರವಲ್ಲ, ಸಾಮಾಜಿಕ ಸಂಬಂಧಗಳಿಗೂ ಅನ್ವಯಿಸುತ್ತದೆ. ಅನೇಕ ಸಲ, ನಾವು ಸೌಜನ್ಯದ ಹೆಸರಿನಲ್ಲಿ ಸಾಮಾಜಿಕ ಅನ್ಯಾಯಗಳನ್ನು ಸಹಿಸುತ್ತೇವೆ. ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಶೋಷಣೆಯೂ ನ್ಯಾಯವೆನಿಸುತ್ತದೆ. ಉದಾಹರಣೆಗೆ ವ್ಯಾಪಾರ ಎಂಬ ಪ್ರಕ್ರಿಯೆಯ ಸಂಗಡವೇ ಸೇರಿಕೊಂಡಿರುವ ಅನ್ಯಾಯವು ನಮಗೆ ಹಾಗೆ ತೋರುವುದೇ ಇಲ್ಲ. ಆನೆ ಕದ್ದವನ ಅಂಗಡಿಯಲ್ಲಿ, ಅಡಕೆ ಕದ್ದವನು ನಮಗೆ ಕಳ್ಳನಾಗುತ್ತಾನೆ. ಆನೆಕಳ್ಳನು ನ್ಯಾಯಾಲಯದಲ್ಲಿ ಫಿರ್ಯಾದಿಯಾಗಿ ಬಿಡುತ್ತಾನೆ. ಇದು ಸರಿಯಲ್ಲವೆಂದು ಯಾವ ಸಜ್ಜನರಿಗೂ ತೋರುವುದಿಲ್ಲ. ತೋರಿದರೂ ಅವರು ಹೇಳುವುದಿಲ್ಲ. ಇಂದಿನ ಇಂಡಿಯಾದಲ್ಲಿ, ನಕ್ಸಲೀಯರನ್ನುಪಬ್ಲಿಕ್ ಎನಿಮಿ ನಂಬರ್ ೧ಎಂದು ಗುರುತಿಸುವುದರ ಹಿಂದೆಯೂ ಇದೇ ಬಗೆಯ ತರ್ಕ ಕೆಲಸ ಮಾಡುತ್ತದೆ.
  ಇಲ್ಲಿ ನಾನು ಯಾವುದೇ ತೀರ್ಮಾನಗಳನ್ನು ಕೊಡುತ್ತಿಲ್ಲ. ಸಹಜವಾದುದು ಯಾವುದು ಎನ್ನುವುದನ್ನು ನಾವೆಲ್ಲರೂ ಸ್ವತಃ ಕಂಡುಕೊಳ್ಳಬೇಕು. ಒಬ್ಬನಿಗೆ ಸಹಜವಾದುದು ಇನ್ನೊಬ್ಬನಿಗೆ ಅಸಜಹವಾಗಿರಬಹುದು. ಇದೂ ಮಹತ್ವದ ಪ್ರಶ್ನೆಯೇ. ಕೊನೆಗೂ ಪ್ರತಿಯೊಬ್ಬರೂ ಅವರವರ ಸ್ವಭಾವಗಳ, ಅನಾಟಮಿಗಳ ಸೆರೆಮನೆಯಲ್ಲಿ ಬಂಧಿತರಾದವರೇ? ಹೆರಿಡಿಟಿ, ಸಂಸ್ಕಾರ ಮತ್ತು ಶಿಕ್ಷಣಗಳು ಈ ನಾಟಕದಲ್ಲಿ ಯಾವ ಪಾತ್ರ ವಹಿಸುತ್ತವೆ. ನನಗಂತೂ ತಿಳಿಯದು.
  ದಯವಿಟ್ಟು ಕೇಳಿ. ಇದನ್ನು ಓದಿ ಮರೆಯಬಹುದಾದ ಬರೆಹವೆಂದು ನೀವು ತಿಳಿದರೆ, ನನಗೂ ಪ್ರಯೋಜನವಿಲ್ಲ, ನಿಮಗೂ ಇಲ್ಲ. ಬದಲಾಗಿ, ನಮ್ಮನ್ನು ನಾವು ಬದಲಿಸಿಕೊಳ್ಳುವುದು ನಮ್ಮ ಹಕ್ಕು ಮತ್ತು ಹೊಣೆಗಾರಿಕೆ ಎಂಬ ತಿಳಿವಳಿಕೆಯು ಈ ಪ್ರಶ್ನೆಗಳನ್ನು ಅಥವಾ ಇಂತಹುದೇ ಪ್ರಶ್ನೆಗಳನ್ನು ತಾನೂ ಕೇಳಿಕೊಳ್ಳುತ್ತದೆ, ತನ್ನದೇ ಉತ್ತರಗಳನ್ನು ಕಂಡುಕೊಳ್ಳುತ್ತದೆ ಮತ್ತು ಅವಕ್ಕೆ ಅನುಗುಣವಾಗಿ ಬದಲಾಗುತ್ತದೆ. ಅದೇ ಸಹಜ.




3 comments:

  1. ಮೇಷ್ಟರೇ,
    ನೀವೂ ಬ್ಲಾಗ್ ಲೋಕ ಪ್ರವೇಶಿಸಿದರಿ ಎಂದರೆ ನಮಗೆ ನಿತ್ಯ ಪಾಠ ಲಭ್ಯ ಎಂಬ ಆನಂದ. ಇಂದು ನಿಮ್ಮ ಬರಹ ಓದಿದ ನಾನೇ ಪರಮ ಸುಖಿ.
    ನೀವು ಬರೆದ: "ಸಹಜವಾದುದು ಯಾವುದು ಎನ್ನುವುದನ್ನು ನಾವೆಲ್ಲರೂ ಸ್ವತಃ ಕಂಡುಕೊಳ್ಳಬೇಕು. ಒಬ್ಬನಿಗೆ ಸಹಜವಾದುದು ಇನ್ನೊಬ್ಬನಿಗೆ ಅಸಜಹವಾಗಿರಬಹುದು." ಈ ಮಾತು ನಿಜವೆಂಬುದನ್ನು ನಾನು ಈ ವರೆಗಿನ ಜೀವನಾನುಭವದಿಂದ ಕಲಿತಿದ್ದೇನೆ.
    ಉಳಿದಂತೆ ನಿಚ್ಚಿನ ಮೇಷ್ಟರು ಪ್ರತಿದಿನ ಇಂತಹದೊಂದು ಲೇಖನ ಬರೆದು ನನ್ನಂತಹವರ ಕಣ್ಣು ತೆರೆಸುತ್ತಾ ಇರಲಿ ಎಂದು ಹಾರೈಕೆ ಮಾತ್ರ.

    ReplyDelete
  2. sir. bahala hidisitu. nimma e ankana. nanage nanna naadavalike shajavadududu emba vichara tiliyitu. adare idu bahla kxta. aneka sala nammannu noduva kannugalu anagarika endu bavisuttave. nanau e bagege yochisuvante maddiddiiri. vandanegalu

    ReplyDelete
  3. tumba nija sir, soujanyakke kattubiddavarige ontitanave gathi...

    ReplyDelete