Thursday, September 12, 2013

SPANISH DANCER by Rainer Mariah Rilke, Kannada Version H.S.R.

ಸ್ಪಾನಿಷ್ ನರ್ತಕಿ
ಗೀರಿಹಚ್ಚಿದ ಬೆಂಕಿಕಡ್ಡಿ, ಹರಡುವಂತೆ ಹತ್ತುದಿಕ್ಕಿಗೆ ಬಿಳಿಬೆಳಕಿನ
ನಾಲಿಗೆ, ಜ್ವಾಲೆಯಾಗಿ ಸಿಡಿಯುವುದಕ್ಕಿಂತ ಮೊದಲು:
ಸುತ್ತ ಪ್ರೇಕ್ಷಕವೃಂದ, ಪ್ರತಿ ಎದೆಯಲೂ ಸ್ಪಂದ, ಉದ್ರೇಕದ ಸಿಂಚನ
ಕಡುಕತ್ತಲ ಕೋಣೆಯಲ್ಲಿ ಮಿಂಚತೊಡಗಿದ ಹಗಲು, ಅವಳ ಕುಣಿತ.

ಥಟ್ಟನೆ, ಧಗ್ಗನೆ ಎಲ್ಲ ಎಲ್ಲ ಬೆಂಕಿ.

ಮೇಲೆ ಚಿಮ್ಮಿತು ನೋಟ, ಕೇಶಪ್ರಪಂಚಕ್ಕೆ ಹಚ್ಚಿದಳು ಬೆಂಕಿ
ಗಿರಗಿರಗಿರ ತಿರುತಿರುಗುತ ಗಾಳಿಬೀಸಿ ಉಡುಪಿಗೆ,
ಬೆಂಕಿಭಾವ ತುಂಬುತಾಳೆ, ಅದೇ ಕುಲುಮೆ ಅವಳು ಒಳಗೆ.
ದಿಗಿಲು ಬಿದ್ದ ಸರ್ಪದಂತೆ ಸುರುಳಿಬಿಚ್ಚಿ ತೋಳು
ಬರಿಬತ್ತಲೆ, ಅಂಗೈ ಹೆಡೆ, ಬೆರಳಬಡಿತ ಟಕಟಕಟಕ ನೋಡುವರೆದೆ ಗಡಿಗೆ

ಮುಂದಿನ ಕ್ಷಣ: ಮೈಯ ಸುತ್ತ ಬೆಂಕಿಕವಚ, ಬಿಗಿಯಾಗಿದೆ ಎನುವಂತೆ,
ಅದನು ಕಳಚಿ ತೆಗೆಯುತಾಳೆ, ಹಮ್ಮಿನಿಂದ ಎಸೆಯುತಾಳೆ
ಅದರ ಕಡೆಗೆ ನೋಡುತಾಳೆ ಮಹರಾಣಿಯ ಹಾಗೆ
ಅದು ಇನ್ನೂ ಉರಿಯುತ್ತಿದೆ, ಅಲ್ಲಿ ಇಲ್ಲಿ ಕೆರಳುತ್ತಿದೆ
ಜೀವಬಿಡಲು ಮನಸೆ ಇಲ್ಲ ಬೆಂಕಿ ಬಟ್ಟೆಗೆ.....
ಎಷ್ಟು ಹೊತ್ತು? ಸಂಪೂರ್ಣ ಧೈರ್ಯದಿಂದ, ಗೆಲುವು ಮಂದಹಾಸದಿಂದ
ಒಮ್ಮೆ ಮೇಲೆ ನೋಡುತಾಳೆ, ಕಾಲಿನಿಂದ ತುಳಿಯುತಾಳೆ
ಇಷ್ಟೆ ಪಾದ, ಎಷ್ಟು ಶಕ್ತಿ? ಬೂದಿಯಾಯ್ತು ಬೆಂಕಿ, ಆರಿತು ಉಕ್ಕಂದ.

SPANISH DANACER 43



Wednesday, July 31, 2013

ಕನ್ನಡ ಕಾದಂಬರಿಇಂದಿನ ಸವಾಲುಗಳು
ಕಥೆ ಮತ್ತು ಕಾದಂಬರಿಗಳ ನಡುವಿನ ವ್ಯತ್ಯಾಸವನ್ನು, ಬರೆಯುವವರ ಅಥವಾ ಓದುವವರ ನೆಲೆಯಿಂದ ಹುಡುಕುವ ಕೆಲಸವು ಕನ್ನಡದಲ್ಲಿ ಅಷ್ಟಾಗಿ ಆಗಿಲ್ಲ. ಕಾರಂತ, ಕುವೆಂಪು ಅಥವಾ ಭೈರಪ್ಪನವರಂತಹ ಲೇಖಕರು ಕಾದಂಬರಿಯೆಂಬ ಬಗೆಯನ್ನು ಮಾತ್ರ ಆರಿಸಿಕೊಂಡರು. ಸಣ್ಣ ಕತೆ ಅವರಿಗೆ ಒಗ್ಗಲಿಲ್ಲ. ಯಾಕೆ? ಮಾಸ್ತಿಯವರು ಕೆಲವು ಕಾದಂಬರಿಗಳನ್ನು ಬರೆದರಾದರೂ ಅವರಿಗೆ ಒಲಿದಿದ್ದು ಸಣ್ಣ ಕತೆ ಮಾತ್ರವೆ. ನಂತರದ ಬರಹಗಾರರಲ್ಲಿ ಕೆಲವರಾದರೂ ಎರಡೂ ಪ್ರಕಾರಗಳನ್ನು ಆರಿಸಿಕೊಂಡು ಎರಡರಲ್ಲಿಯೂ ಗೆದ್ದರು. ದೇವನೂರ ಮಹಾದೇವ ಅವರು ಅವೆರಡರ ನಡುವಿನ ಗಡಿಗೆರೆಗಳನ್ನು ಉಳಿಸುವ ಅಳಿಸುವ ಕೆಲಸವನ್ನು ಒಟ್ಟೊಟ್ಟಿಗೆ ಮಾಡಿದರು. ಆದರೆ, ಈಗ ಬರೆಯುತ್ತಿರುವ ಐವತ್ತರಿಂದ ಇಪ್ಪತ್ತರವರೆಗಿನ ತರುಣಿ-ತರುಣರು, ಕಾದಂಬರಿಯನ್ನು ಬರೆಯಬಯಸಿದ್ದು ಕಡಿಮೆ. ಬರೆದಾಗಲೂ ಗೆದ್ದಿದ್ದು ಕಡಿಮೆ. ಹೀಗೆ ಆಗುವುದರ ಕಾರಣಗಳು ಎಲ್ಲಿವೆ? ಸಮಾಜದಲ್ಲೋ, ಸೃಜನಶೀಲತೆಯಲ್ಲೋ, ಮಾಧ್ಯಮಗಳು ಹೇರುತ್ತಿರುವ ಒತ್ತಡಗಳಲ್ಲೋ ತಂತ್ರಜ್ಞಾನದ ಫಲವಾದ ಕಡಿಮೆ ಗಮನ(Low attention span) ಸನ್ನಿವೇಶದಲ್ಲೋ ಹೇಳುವುದು ಕಷ್ಟ. ಪ್ರಾಯಶಃ ಇವೆಲ್ಲದರ ಜೊತೆಗೆ ಇನ್ನೂ ಕೆಲವು ಕಾರಣಗಳಿರಬಹುದು. ಅವುಗಳನ್ನು ಕುರಿತು ಯೋಚಿಸುವುದು ಈ ಬರವಣಿಗೆಯ ಉದ್ದೇಶ. ಇದನ್ನು ಓದುತ್ತಿರುವ ನಿಮಗೂ ನಿಮ್ಮದೇ ಆದ ಉತ್ತರಗಳಿರುತ್ತವೆ. ಯಾವ ಭಾಷೆಯದ್ದೇ ಆಗಲಿ, ಯಾವ ಕಾಲದ್ದೇ ಆಗಲಿ, ಐನೂರು ಪುಟಗಳ ಪುಸ್ತಕವನ್ನು ಓದುವ ಆಸಕ್ತಿ-ವ್ಯವಧಾನಗಳು ನಮ್ಮಲ್ಲಿ ಇಲ್ಲವಾಗುತ್ತಿವೆಯೇ? ಟೆಸ್ಟ್ ಕ್ರಿಕೆಟ್ ಬದಲು  ‘ಟ್ವೆಂಟಿ-ಟ್ವೆಂಟಿಬಂದಿರುವ ಹಾಗೆ, ಕಾದಂಬರಿಗಳೂ ಬೇಡವೆನಿಸಿದೆಯೇ? ನನಗೆ ತೋರಿದ ಕೆಲವು ಸಂಗತಿಗಳು ಈ ರೀತಿ ಇವೆ:

1.     ವಿಭಜಿತವಾದ ಸಮಾಜ ಮತ್ತು ಸ್ವಕೇಂದ್ರಿತವಾದ ದೃಷ್ಟಿಕೋನ: ಮೊದಲಿನಿಂದಲೂ ನಮ್ಮದು ವರ್ಣ, ವರ್ಗ, ಲಿಂಗ ಮತ್ತು ಜಾತಿಗಳಲ್ಲಿ ಹರಿದುಹಂಚಿರುವ ಸಮಾಜ. ಅಲ್ಲದೆ ಅವುಗಳ ನಡುವೆ ಮೇಲುಕೀಳುಗಳ ಸಂಬಂಧವಿತ್ತು, ಇದೆ. ಇದರ ಫಲವಾಗಿ ಪರಸ್ಪರ ಅನುಮಾನ-ತಿರಸ್ಕಾರ-ಭಯ-ಈರ್ಷೆ.ಮುಂತಾದ ಭಾವಸಂಬಂಧಗಳು ಸಹಜವಾಗಿಯೇ ಬೆಳೆದಿರುತ್ತವೆ. ಮೇಲುನೋಟದ ಸಾಮೀಪ್ಯದ ಸಂಗಡವು ಅಂತರ ಇರುತ್ತದೆ. ಕಳೆದ ಕೆಲವು ದಶಕಗಳಲ್ಲಿ ಮೂಡಿದ ಹೊಸ ಎಚ್ಚರಗಳು ಸಮುದಾಯಗಳಲ್ಲಿ ಮತ್ತು ಅವುಗಳಲ್ಲಿ ಮೂಡಿಬಂದ ಕಲಾವಿದರಲ್ಲಿ ಆತ್ಮನಿವೇದನೆ ಮತ್ತು ಆತ್ಮಸಮರ್ಥನೆಗಳ ಗುಣವನ್ನು ಮೂಡಿಸಿವೆ. ‘ಮೇಲುಎನ್ನಲಾದ ಜಾತಿಗಳು ಈ ಲಕ್ಷಣದಿಂದ ಬಿಡುಗಡೆ ಪಡೆದಿಲ್ಲ. ಮಹಿಳೆಯರ ಅತ್ಯುತ್ತಮವಾದ ಬರವಣಿಗೆಯೂ ಸೇರಿದಂತೆ, ಇದು ಇಂದಿನ ಅಪೇಕ್ಷೆ ಮತ್ತು ನಿರೀಕ್ಷೆ. ಆದರೆ, ಕಾದಂಬರಿಯು ನಿಜವಾದ ಅರ್ಥದಲ್ಲಿ ಹಲವು ಸಮುದಾಯಗಳನ್ನು ಒಳಗೊಳ್ಳುವ, ಎಲ್ಲವನ್ನೂ ಪ್ರೀತಿಯಿಂದ, ತಿಳಿವಳಿಕೆಯಿಂದ ನೋಡುವ ಪ್ರಕಾರ. ಅಂತೆಯೇ ಅದರಲ್ಲಿ ತನ್ನದೇ ಸಮುದಾಯದ ಆತ್ಮವಿಮರ್ಶೆಯ ನೆಲೆಗಳೂ ಇರುತ್ತವೆ. ಈ ಮಾತಿಗೆ ಕುವೆಂಪು ಅವರ ಕಾದಂಬರಿಗಳಿಗಿಂತ ಬೇರೆ ನಿದರ್ಶನ ಬೇಕಿಲ್ಲ. ಆದರೆ ಇಂದಿನ ಬರವಣಿಗೆಯಲ್ಲಿನಾವುಮತ್ತುಅನ್ಯರು’  ಎಂಬ ವಿಂಗಡಣೆ ಇರುತ್ತದೆ. ಇಂತಹ ಆತ್ಮಮರುಕ ಅಥವಾ ಅಹಂಕಾರಗಳು ಕಾದಂಬರಿಯ ಬರವಣಿಗೆಗೆ ಸೂಕ್ತವಲ್ಲ. ನಮ್ಮ ಸಮುದಾಯಗಳ ಚೌಕಟ್ಟನ್ನು ಮೀರಿ ಒಟ್ಟು ಸಮಾಜದ ತಲ್ಲಣಗಳನ್ನು ಒಳಗೊಳ್ಳುವ ಬರವಣಿಗೆಯು ಅಂದಿಗೂ ಇಂದಿಗೂ ಅಪರೂಪವೇ. ಕಾರಂತರೂ ಸೇರಿದಂತೆ ಹಲವು ಲೇಖಕರ ಅನೇಕ ಕಾದಂಬರಿಗಳು ಇಂದು ರೂಪಿತವಾಗುತ್ತಿರುವ ಓದುಗರಿಗೆ ಇಷ್ಟವಾಗದೆ ಹೋದರೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ. ‘ಚೋಮನ ದುಡಿ’, ‘ಕುಡಿಯರ ಕೂಸು’, ‘ಪ್ರಕೃತಿಯಂತಹ ಕಾದಂಬರಿಗಳೇ (ಶ್ರೀರಂಗ) ಹೀಗೆ ಹಿನ್ನೆಲೆಗೆ ಸರಿದಿರುವಾಗ ಉಳಿದವರ ಮಾತೇನು? ಇಂದು ಬರೆಯಲಾಗುತ್ತಿರುವ ಕಾದಂಬರಿಗಳ ಮಾತೂ ಹೀಗೆಯೇ. ‘ಬರೆದವರು ಯಾರು?’ ಎನ್ನುವುದು ಓದಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸುತ್ತಿದೆ. ಆದ್ದರಿಂದಲೇ ಒಡೆದ ಸಮಾಜದ ಒಡಲಿನಿಂದ ಒಡೆಯದ ಪ್ರಜ್ಞೆಯನ್ನು ಹೊಂದಿರುವ ಕಾದಂಬರಿಗಳನ್ನು ನಿರೀಕ್ಷಿಸುವುದು ಕಡುಕಷ್ಟ.              ಇನ್ನೊಂದು ಬಗೆಯ ಕಾದಂಬರಿಗಳು, ವ್ಯಕ್ತಿಯ ಸಂಕಟಗಳನ್ನು ನಡುವೆ ಇಟ್ಟುಕೊಂಡು ಅವುಗಳ ಸುತ್ತ ಆಲೋಚನೆಯ, ಕಲೆಯ ಗೂಡನ್ನು ಕಟ್ಟುತ್ತವೆ. ಇವುಗಳು ಏನಿದ್ದರೂ ಸಮಾಜವನ್ನು ವ್ಯಕ್ತಿಯ ಅಂತರಂಗದಲ್ಲಿ ಮೂಡಿದ ಪ್ರತಿಬಂಬವಾಗಿ ಮಾತ್ರ ನೋಡಬಲ್ಲವು. ಆದರೆ, ಇವುಗಳಲ್ಲಿ ಕೆಲವಾದರೂ ಎಲ್ಲ ಕಾಲಕ್ಕೂ ಸಲ್ಲುವ ಗುಣವನ್ನು ಪಡೆದಿರುತ್ತವೆ. ಇಂತಹ ಬರವಣಿಗೆಯನ್ನು ನವ್ಯದ ಪಳೆಯುಳಿಕೆಗಳೆಂದು ಹೆಸರಿಸಿ ಓದದಿರುವುದು ಸುಲಭ ಆದರೆ ಸರಿಯಲ್ಲ. ನಮ್ಮ ಕಾಲದ ಓದಿನ ಒಂದು ನೆಲೆಯಲ್ಲಿ ಈ ಬಿಕ್ಕಟ್ಟು ಇದೆ.                       ಕೊನೆಗೂ ಎಷ್ಟೇ ಮುಖ್ಯವಾದ ಕಾದಂಬರಿ ಬರಲಿ, ಅವುಗಳನ್ನು ಬರೆದವರನ್ನು ಇಷ್ಟಪಡುವ ಕೆಲವರು ಮಾತ್ರ ಹಾಡಿಹೊಗಳುತ್ತಾರೆ ಮತ್ತು ಉಳಿದವರು ನಿರ್ಲಕ್ಷಿಸುತ್ತಾರೆ ಎನ್ನುವುದು ಆರೋಗ್ಯಕರವೇ? ಉದಾಹರಣೆಗೆಕಾಲಜಿಂಕೆ’, ‘ಲೋಟಸ್ ಪಾಂಡ್’, ‘ಪಾಚಿ ಕಟ್ಟಿದ ಪಾಗಾರಮುಂತಾದ ಕಾದಂಬರಿಗಳುಮೇನ್ ಸ್ಟ್ರೀಮ್ನ ಆಚೆಗೇ ಉಳಿದುದೇಕೆ
2.      ಪ್ರಾದೇಶಿಕತೆಯ ಪ್ರಯೋಜನಗಳು ಮತ್ತು ಅದರಿಂದಲೇ ಹುಟ್ಟಿರುವ ಬಿಕ್ಕಟ್ಟುಗಳು: ಭಾಷೆಯಲ್ಲಿ ಮತ್ತು ವಿವರಗಳಲ್ಲಿ ಪ್ರಾದೇಶಿಕತೆಯನ್ನು ಬಳಸುವುದರ ಇತಿಮಿತಿಗಳು ಈ ಕಾಲದ ಕಾದಂಬರಿಕಾರರು ಎದುರಿಸಿರುವ ಮತ್ತೊಂದು ಮುಖ್ಯ ಸವಾಲು. ‘ಕುಸುಮಬಾಲೆಯಿಂದ ಮೊದಲಾಗಿಬದುಕು’, ‘ಅರಮನೆಗಳವರೆಗೆ ಹತ್ತು ಹಲವು ಒಳ್ಳೆಯ ಮತ್ತು ಕೆಟ್ಟ ಕಾದಂಬರಿಗಳು ಈ ಅನುಭವವನ್ನು ಪಡೆದಿವೆ. ಈ ಸಂಗತಿಯು ಈ ಕಾಲದ ಬರಹಗಾರರಲ್ಲಿ ಆತಂಕ ಮತ್ತು ತಲ್ಲಣಗಳನ್ನು ಹುಟ್ಟಿಸಿದೆ. ಇದು ಕೇವಲ ಓದುಗರಿಗೆ ಸಂವಹನವಾಗುವ ಅಥವಾ ಆಗದಿರುವ ಪ್ರಶ್ನೆಯಲ್ಲ. ಬದಲಾಗಿ ಪ್ರಾದೇಶಿಕತೆಯ ಚೌಕಟ್ಟಿನಲ್ಲಿ ಎಷ್ಟನ್ನು ಹೇಳಬಹುದು, ಹೇಗೆ ಹೇಳಬಹುದು ಎನ್ನುವ ಪ್ರಶ್ನೆ. ಇದು ಲೇಖಕನ ಪ್ರತಿಭೆಯನ್ನು ಮಾತ್ರವಲ್ಲ, ಅವನ ಉದ್ದೇಶಗಳನ್ನೂ ಅವಲಂಬಿಸಿರುತ್ತದೆ. ತನ್ನಷ್ಟಕ್ಕೆ ತಾನು ದೋಷವೂ ಅಲ್ಲದ, ಗುಣವೂ ಅಲ್ಲದ ಪ್ರಾದೇಶಿಕತೆಯು ಲೇಖಕನ ಹಿನ್ನೆಲೆಯನ್ನು ಅವಲಂಬಿಸಿದ ವಿಶಿಷ್ಟ ಲಕ್ಷಣವಷ್ಟೆ. ಕಾದಂಬರಿಯ ಮಹತ್ವ ಮತ್ತು ಕಲಾತ್ಮಕತೆಗಳು ಅವುಗಳ ಆಚೆಗಿನ ಸಂಗತಿಗಳಿಂದ ತೀರ್ಮಾನವಾಗುತ್ತವೆ. ನಮ್ಮ ಹಲವು ಲೇಖಕರು ಇದನ್ನು ಅರಿತಿಲ್ಲ. ಅಮರೇಶ ನುಗಡೋಣಿ ಮತ್ತು ಮೊಗಳ್ಳಿ ಗಣೇಶ ಅವರ ಕತೆಗಳ ಗೆಲುವಿನೊಂದಿಗೆ ಅದೇ ಪ್ರದೇಶದಿಂದ ಬಂದ ಬೇರೆ ಲೇಖಕರಅರೆಅಥವಾಅಲ್ಪಾಯುಷಿಯಶಸ್ಸನ್ನು ನೋಡಿದರೆ ನನ್ನ ಮಾತು ಸ್ಪಷ್ಟವಾಗುತ್ತದೆ. ಕಾದಂಬರಿಯಂತೂ ಇನ್ನಷ್ಟು ಬಿಕ್ಕಟ್ಟುಗಳನ್ನು ಒಡ್ಡಿದೆ.      
3.    ನಿರೂಪಣೆಯ ಬಗೆಗಳು: ಕನ್ನಡ ಕಾದಂಬರಿಯು ನವೋದಯ, ಪ್ರಗತಿಶೀಲ, ನವ್ಯ ಮುಂತಾದ ಚಳುವಳಿಗಳ ಚೌಕಟ್ಟಿಗೆ ಸಿಗುವುದಿಲ್ಲ. ವಾಸ್ತವವಾದೀ ನಿರೂಪಣೆ ಮತ್ತು ಸಾಂಕೇತಿಕತೆಗಳು ಅದರ ಮುಖ್ಯ ಬಗೆಗಳು. ನವ್ಯದ ನಂತರ ಬರೆಯತೊಡಗಿದ ಲೇಖಕರಿಗೆ ವಾಸ್ತವಮಾರ್ಗದಲ್ಲಿಯೇ ಹೇಳುವುದು ಹೇರಳವಾಗಿತ್ತು. ಆದರೆ, ಅವರು ಬರೆಯತೊಡಗಿದ ವಸ್ತು ಅವರಿಗೆ ಅತಿನಿಕಟವಾಗಿದ್ದು, ಅಲ್ಲಿನ ದುಃಖ ಮತ್ತು ಕೋಪಗಳು ಕಾದಂಬರಿಕಾರರದೂ ಆಗಿತ್ತು. ಕಥೆಗಳನ್ನು ಬರೆಯುವಾಗ, ಹೇಗೋ ನಿರ್ವಹಿಸಬಹುದಾದ ಈ ಬಿಕ್ಕಟ್ಟು ಕಾದಂಬರಿಗಳ ಸಂದರ್ಭದಲ್ಲಿ ಇನ್ನಷ್ಟು ಸಂಕೀರ್ಣವಾಗುತ್ತದೆ. ಸಾಮಾಜಿಕ ವಾಸ್ತವದ ಪ್ರಾಮಾಣಿಕವಾದ, ಸುದೀರ್ಘ ನಿರೂಪಣೆಯು ತನ್ನಷ್ಟಕ್ಕೆ ತಾನೇ ಕಾದಂಬರಿಯಾಗುವುದೇ? ನಮ್ಮ ಜೀವನದ ಹಾಡುಪಾಡುಗಳನ್ನು ನಮ್ಮವರೊಂದಿಗೆ-ಅನ್ಯರೊಂದಿಗೆ ಸರಳವಾಗಿ, ನೇರವಾಗಿ ಹಂಚಿಕೊಳ್ಳುವುದಷ್ಟೇ ಬರವಣಿಗೆಯ ಗುರಿಯೆಂಬ ನಿಲುವು ಏನು ಮಾಡುತ್ತದೆ? ನಮ್ಮ ಮನಸ್ಸುಗಳು ಮತ್ತು ಓದುವಿಕೆ ಕೂಡ ನೇರವಾಗಿ ಕತೆ ಹೇಳದ ಸುದೀರ್ಘ ಕಥಾನಕಗಳನ್ನು ಒಳಗೊಳ್ಳುವ ಶಕ್ತಿಯನ್ನು ಕಳೆದುಕೊಂಡಿವೆಯೇ?
4.   ಸಮುದಾಯಗಳ ಆತ್ಮಕಥನ:ಈಚೆಗೆ ಮುನ್ನೆಲೆಗೆ ಬಂದಿರುವ ಕೆಲವು ಕಾದಂಬರಿಗಳು ನಿರ್ದಿಷ್ಟ ಸಮುದಾಯಗಳ ಇತಿಹಾಸವನ್ನು ಕಟ್ಟಿಕೊಡುವ ಉಮೇದನ್ನು ತೋರಿಸಿವೆ. (‘ಸ್ವಪ್ನಸಾರಸ್ವತ’ ‘ಮಿತ್ತಬೈಲು ಯಮುನಕ್ಕ’, ‘ಉಲ್ಲಂಘನೆ’, ‘ತಲಗಳಿ’) ಇವು ಸಾಕಷ್ಟು ಸಂಶೋಧನೆಯ ಫಲವಾಗಿ ಮೂಡಿಬಂದಿರುತ್ತವೆ. ಮಾನವಿಕ-ಸಾಮಾಜಿಕ ಅಧ್ಯಯನಗಳಿಗಿಂತ ಭಿನ್ನವಾದ ಕಥಾನಕಗಳನ್ನು ರೂಪಿಸಿರುತ್ತವೆ. ಆದರೆ, ಅವುಸಮುದಾಯಗಳ ಆತ್ಮಕಥನದ ಆಚೆಗೆ ಹೊಂದಿರುವ ಉದ್ದೇಶಗಳು ಮತ್ತು ಪಡೆದಿರುವ ಸಿದ್ಧಿಗಳು ಯಾವ ಬಗೆಯವು ಎನ್ನುವುದು ಕೂಡ ಮುಖ್ಯ. ಇದು ಬರವಣಿಗೆಯ ಅಧಿಕೃತತೆಯ ಪ್ರಶ್ನೆಯಲ್ಲ. ಬದಲಾಗಿ ಬರೆಯುವವನ ಒಟ್ಟು ತಾತ್ವಿಕತೆ ಮತ್ತು ಜೀವನದರ್ಶನದ ಪ್ರಶ್ನೆ. ಕಿರಿಯ ಬರಹಗಾರರಿಗಂತೂ ಇದು ಹುಚ್ಚುಹುದುಲಾಗುತ್ತದೆ. ಹೀಗಾದಾಗ, ಕಥೆ, ಕಥನ ಮತ್ತು ಕಾದಂಬರಿಗಳ ನಡುವಿನ ಅಂತರವೇ ಮಸುಳಿಸುತ್ತದೆ.   
5.    ಕಾದಂಬರಿ ಮತ್ತು ಜೀವನದರ್ಶನ: ಯಾವುದೇ ಶ್ರೇಷ್ಠ ಕಾದಂಬರಿಯ ಒಳಗೆಕಾದಂಬರಿಯೆಂದರೇನು ಎನ್ನುವುದರ ಹುಡುಕಾಟವೂ ಇರುತ್ತದೆ. ಇದು ಅಕಡೆಮಿಕ್ ಪಾಂಡಿತ್ಯದಿಂದ ಬರುವುದಲ್ಲ. ಅಂತೆಯೇ ಪ್ರಪಂಚದ ಹಲವು ಕಾದಂಬರಿಗಳ ಓದು ಕೊಂಚ ನೆರವು ನೀಡಬಹುದಾದರೂ ಅಷ್ಟೇ ಸಾಲದು. ಎಲ್ಲಕ್ಕಿಂತ ಮುಖ್ಯವಾಗಿ ಇದು ಅನುಭವ, ಬುದ್ಧಿ, ಭಾವನೆ ಮತ್ತು ಭಾಷಿಕ ಪರಿಕರಗಳ ಸೂಕ್ತವಾದ ಸಂಯೋಜನೆಯ ಪ್ರಶ್ನೆ. ನಮ್ಮ ಯುವಲೇಖಕರಿಗೆ ಇಂತಹ ಶಕ್ತಿಯು ಇಲ್ಲವೆಂದಲ್ಲ. ನಿಜವಾಗಿ ಬೇಕಿರುವುದು ಸಾಮಾಜಿಕವಾದ ಒತ್ತಡಗಳನ್ನು ಮೀರುತ್ತಲೇ ಅವುಗಳಿಗೆ ಧ್ವನಿಕೊಡುವ ಶಕ್ತಿ. ತಾತ್ವಿಕತೆಯು ಒಟ್ಟು ಜೀವನದ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮತ್ತು ಉತ್ತರಗಳಿಗಾಗಿ ಕೃತಿಯ ಬೆಳವಣಿಗೆಯಲ್ಲಿಯೇ ಹುಡುಕುವ ಕೆಲಸ. ಹೊಸ ತಿಳಿವಳಿಕೆಯು ಬರವಣಿಗೆಯ ಹೊಸ ಬಗೆಗಳನ್ನು ಬಯಸುತ್ತದೆ. ಹಾಗೆ ಮೂಡುವ ಹೊಸ ಬಗೆಗಳು ಓದುಗರಿಗೆ ಹಿಡಿಸದೆ ಇರಬಹುದು. ‘ಕಾನೂರು ಹೆಗ್ಗಡಿತಿಮತ್ತುಮಲೆಗಳಲ್ಲಿ ಮದುಮಗಳುಕಾದಂಬರಿಗಳ ನಡುವೆ ಇರುವ ವ್ಯತ್ಯಾಸಗಳ ಅಧ್ಯಯನವು ಕುವೆಂಪು ಅವರ ಲೋಕದರ್ಶನವು ಬೆಳೆದ ಬಗೆಗೆ ಕನ್ನಡಿಯಾಗಿದೆ. ಅವೆರಡರ ನಡುವೆಶ್ರೀ ರಾಮಾಯಣ ದರ್ಶನಂಇರುವುದು ಆಕಸ್ಮಿಕವಲ್ಲ. ನಮ್ಮ ಲೇಖಕರಿಗೆ ಅಂತಹ ವಾತಾವರಣವಾಗಲೀ ಓದಾಗಲೀ ಸಾಧ್ಯವಾಗುತ್ತಿಲ್ಲವೇ?
6.    ಕಟ್ಟುವಿಕೆ ಮತ್ತು ಕಲ್ಪಕತೆ: ಕಾದಂಬರಿಯು ಹೇಳುವಿಕೆಯ ಹಾಗೆಯೇ ಕಟ್ಟುವಿಕೆಯನ್ನೂ ಬಯಸುತ್ತದೆ. ನೇರವಾದ, ಉತ್ತಮಪುರುಷ ನಿರೂಪಣೆಯಿರುವ, ಕಾಲಾನುಕ್ರಮವಾದ ಕಥನಕ್ರಮವು ಇಂತಹ ಕಟ್ಟುವಿಕೆಗೆ ಶತ್ರು. ಕಥೆಯಲ್ಲಿ ಸಹಜವಾಗಿಯೇ ಬರುವ ವಿವರಗಳ ಜೊತೆಗೆ, ಅಗತ್ಯವಾದ ಸೂಕ್ಷ್ಮತೆಯನ್ನು ಕೊಡುವಂತಹ ವಿವರಗಳನ್ನು ಕಲ್ಪಿಸಿಕೊಂಡು, ಹುಡುಕಿಕೊಂಡು ಅವು ಕಥೆಯ ಓಟಕ್ಕೆ ಭಂಗ ತರದಂತೆ ಜೋಡಿಸುವುದು ಕಲೆ. ಅಂತಹ ಕಲ್ಪಕತೆಯ(Imagination)  ಕಾದಂಬರಿಗೆ ಬೇಕೇಬೇಕು. ಅಲ್ಲಿ ಅ-ವಾಸ್ತವವೂ ವಾಸ್ತವವನ್ನು ಕಾಣಿಸುವ ಬೆಳಕಿಂಡಿ. ಕಳೆದ ಎರಡು ಮೂರು ದಶಕಗಳು ಜೀವನದಲ್ಲಿ ತಂದಿರುವ ಬದಲಾವಣೆಯನ್ನು ಅದರ ಎಲ್ಲ ಆಯಾಮಗಳನ್ನು ನಿರ್ಮಮವಾಗಿ ಗ್ರಹಿಸಿ, ಅರ್ಥೈಸಿಕೊಂಡು ರಚಿತವಾಗುವ ಕಾದಂಬರಿಯು ಇನ್ನೂ ಬರಬೇಕಾಗಿದೆ. ಅದು ನಿಜವಾಗಿಯೂ ಟಾಲ್ ಸ್ಟಾಯ್ ಮಾಡಿದ ಕೆಲಸ. ಅಂತಹ ಸಮಗ್ರ ಅನುಭವ ಇರುವವರು ಬರವಣಿಗೆಯಲ್ಲಿ ತೊಡಗುವ ಅವಕಾಶ ನಮ್ಮ ಅಕಡೆಮಿಕ್ ಸನ್ನಿವೇಶವು ರೂಪಿಸಿಲ್ಲ. ಹಾಗಾಗಿ ನಮ್ಮ ಲೇಖಕರದು ಇಲ್ಲವೇ ಸೀಮಿತ ಅನುಭವ ಅಥವಾ ಬಡ ಕಲ್ಪನೆಯ ಫಲವಾದಹುಸಿಅನುಭವ.ಅದರ ಜೊತೆಗೆ ಕಳೆದ ಪೀಳಿಗೆಗಳ ಲೇಖಕರು ಈ ಕಾಲದ ಬಗ್ಗೆಯೂ ಬರೆಯಬೇಕಾಗಿರುದು ನಮ್ಮ ದುರಂತ. ‘ಶಿಕಾರಿ, ‘ಪುರುಷೋತ್ತಮ’, ‘ಮಾಯಾಲೋಕ’, ‘ಹಳ್ಳ ಬಂತು ಹಳ್ಳ’, ‘ಪ್ರೀತಿ, ಮೃತ್ಯು, ಭೀತಿ’, ‘ಹಳ್ಳ ಬಂತು ಹಳ್ಳಮುಂತಾದ ಕೃತಿಗಳನ್ನು ಬರೆದವರು ಎಪ್ಪತ್ತರ ವಯಸ್ಸನ್ನು ಮೀರಿದ್ದಾರೆ. ಅನಂತರದ ಪೀಳಿಗೆಯಗಾಂಧಿ ಬಂದ’, ‘ಕಾಲಜಿಂಕೆ’, ‘ಒಂದು ಬದಿ ಕಡಲು’, ‘ಅಜ್ಞಾತನೊಬ್ಬನ ಆತ್ಮಚರಿತ್ರೆಮುಂತಾದವನ್ನು ಬರೆದವರೂ ತರುಣರಲ್ಲ. ಕನ್ನಡದ ಬಹುಪಾಲು ಶ್ರೇಷ್ಠ ಕಾದಂಬರಿಗಳು ಲೇಖಕರಿಗೆ ಮೂವತ್ತೈದು ವರ್ಷಗಳಾಗುವ ಮೊದಲೇ ಬಂದಿವೆ. ನಮ್ಮ ತರುಣ ಪ್ರತಿಭೆಗೆ ಏನಾಗಿದೆ?
7.    ಕಾದಂಬರಿಗಳನ್ನು ಓದುವುದು ಹೇಗೆ ಎಂದು ತರಬೇತಿ ಕೊಡಲು ಸಾಧ್ಯವಿಲ್ಲ. ಆದರೆ ಶಿಕ್ಷಣ, ವಿಮರ್ಶೆ, ಮಾಧ್ಯಮಗಳು ಮುಂತಾದವು ಈ ದಿಕ್ಕಿನಲ್ಲಿ ಕೊಂಚವಾದರೂ ಕೆಲಸ ಮಾಡಬೇಕು. ಸ್ವತಃ ಕಾದಂಬರಿಕಾರರ ಓದು ಕೂಡ ಮೇಲುಮೇಲಿನದೇ ಆಗಿರಬಹುದೇ? ಕನ್ನಡದಾಚೆಗೆ ಬಂದಿರುವ ಬರವಣಿಗೆಯು ನಮಗೆ ಅಪರಿಚಿತವಾಗಿಯೇ ಉಳಿಯುವುದು ಎಷ್ಟು ಸರಿ. ಕುವೆಂಪು ಟಾಲ್ ಸ್ಟಾಯ್ ಮತ್ತು ಹಾರ್ಡಿ ತನ್ನ ಮೇಲೆ ಬೀರಿದ ಬಗ್ಗೆ ಬರೆಯುತ್ತಾರೆ. ನನ್ನ ಗೆಳೆಯ ಓ.ಎಲ್.ಎನ್. ಅವರು ಅದ್ಭುತವಾಗಿ ಕನ್ನಡಕ್ಕೇ ತಂದಿರುವ ‘War and Peace’ ಅನುವಾದಕ್ಕೆ ಉಗುರು ಬೆಚ್ಚಗಿನ ಪ್ರತಿಕ್ರಿಯೆಯೂ ದೊರಕಿಲ್ಲ. ಪ್ರಶಸ್ತಿ ಕೊಟ್ಟರೆ ಸಾಲದು, ಓದಬೇಕು. ಓದುವ ಬಗೆಗಳನ್ನು ಕಂಡುಕೊಳ್ಳಬೇಕು.                                             
ನನ್ನ ಇದುವರೆಗಿನ ಮಾತುಗಳಲ್ಲಿ ನಿರಾಶೆಮತ್ತು ಆತಂಕಗಳು ಎದ್ದು ಕಾಣಿಸಬಹುದು. ಆದರೆ ಅದು ದಿಟವಲ್ಲ. ನಾನು ಕೆ. ಸತ್ಯನಾರಾಯಣ, ಹನೂರು ಕೃಷ್ಣಮೂರ್ತಿ, ಕುಂವೀ, ಎಚ್. ನಾಗವೇಣಿ, ಶ್ರೀನಿವಾಸ ವೈದ್ಯ, ವಿವೇಕ ಶಾನುಭಾಗ್, ಎಚ್.ಎಸ್. ಚಂಪಾವತಿ, ಮೊಗಳ್ಳಿ ಗಣೇಶ್, ಅಬ್ದುಲ್ ರಶೀದ್ ಮುಂತಾದ ಅನೇಕ ಲೇಖಕರ ಕಾದಂಬರಿಗಳನ್ನು ಓದಿ ಸಂತೋಷಪಟ್ಟಿದ್ದೇನೆ. ಅವುಗಳ ಒಳಗೊಳ್ಳುವ ಗುಣಗಳನ್ನು ಇಷ್ಪಟ್ಟಿದ್ದೇನೆ. ನನಗೆ ನಾಳೆಗಳಲ್ಲಿ ಮತ್ತು ಕನ್ನಡದ ಸೃಜನಶೀಲತೆಯಲ್ಲಿ ನಂಬಿಕೆಯಿದೆ. ಇಂದಿನ ಬಿಕ್ಕಟ್ಟುಗಳನ್ನು ಹುಡುಕುವ ಈ ಪ್ರಯತ್ನ ಕೂಡ ಅಂಥ ನಂಬಿಕೆಯ ಫಲವೇ ಹೊರತು ಸಿನಿಕತೆಯಲ್ಲ.
                                                                    ಎಚ್.ಎಸ್. ರಾಘವೇಂದ್ರ ರಾವ್                                                                         16-07-2013 

Friday, August 31, 2012

ಹಳೆಯ ಹಸ್ತಪ್ರತಿ - ಕಾಫ್ಕಾ ಬರೆದ ಅಪೂರ್ಣ ಕಥೆ



ಹಳೆಯ ಹಸ್ತಪ್ರತಿ
ಹೌದು. ದೇಶವನ್ನು ಕಾಪಾಡಿಕೊಳ್ಳೋದು ಹೇಗೆ ಅಂತ ನಮಗೆ ಗೊತ್ತಿಲ್ಲ. ಉಡಾಫೆಯಲ್ಲೇ ಕಾಲ ಕಳೆದುಹೋಯ್ತು. ಇಲ್ಲಿಯ ತನಕ ಅದರ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ. ದಿನದಿನದ ಕೆಲಸಗಳಲ್ಲಿ ಮುಳುಗಿಬಿಟ್ಟಿದ್ವಿ. ಆದರೆ, ಈಚೆಗೆ ಆಗ್ತಾ ಇರೋ ಘಟನೆಗಳು ಮನಸ್ಸು ಕೆಡಿಸೋದಕ್ಕೆ ಶುರುಮಾಡಿವೆ.
ನಾನು ಚಮ್ಮಾರ. ನನ್ನ ಅಂಗಡಿ, ಅರಮನೆ ಎದುರುಗಡೆ ಇರೋ ಚೌಕದಲ್ಲಿದೆ. ದಿನಾ ಬೆಳಿಗ್ಗೆ ಸೂರ್‍ಯ ಹುಟ್ಟೋ ಹೊತ್ತಿಗೆ, ಅಂಗಡಿ ಬಾಗಿಲು ತೆಗೀತೀನಿ. ಅಷ್ಟು ಹೊತ್ತಿಗಾಗಲೇ, ಸರ್‍ಕಲ್ಲಿಗೆ  ಬರೋ ಎಲ್ಲಾ ದಾರಿಗಳೂ ಬಂದ್. ಎಲ್ಲಿ ನೋಡಿದ್ರೂ ಸೈನಿಕರೇ ಕಾಣಿಸ್ತಾರೆ, ಅವರು ನಮ್ಮ ಸೈನಿಕರಲ,. ಉತ್ತರದೇಶದಿಂದ ಬಂದಿರೋರು ಅಂತ, ನೋಡಿದಕೂಡಲೇ ಗೊತ್ತಾಗತ್ತೆ. ರಾಜಧಾನಿ, ಗಡಿ ಪ್ರದೇಶದಿಂದ ಅಷ್ಟು ದೂರ ಇದೆ. ಆದರೂ ಇವರೆಲ್ಲಾ ನಮ್ಮ ನಡುವೆ ಬಂದುಬಿಟ್ಟಿದಾರೆ. ಅಷ್ಟೇ ಅಲ್ಲ, ದಿನೇ ದಿನೇ, ಅವರ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಹೇಗೆ ಅಂತ ನನಗಂತೂ ಅರ್‍ಥವಾಗ್ತಿಲ್ಲ.  
ಅದು ಅವರ ಸ್ವಭಾವ. ಅವರಿಗೆ, ಜನ ವಾಸ ಮಾಡೋ ಮನೆಗಳು ಅಂದರೆ ದ್ವೇಷ. ನೀಲಿ ಆಕಾಶದ ಕೆಳಗೆ ಟೆಂಟ್ ಹಾಕಿಕೊಂಡು, ಜೀವನ ನಡೆಸ್ತಾರೆ. ಮೂರು ಹೊತ್ತೂ ಅದೇ ಕೆಲಸ. ಕತ್ತಿ ಸಾಣೆಹಿಡಿಯೋದು, ಬಾಣಾ ಚೂಪುಮಾಡೋದು, ಕುದುರೆಸವಾರಿ ಪ್ರಾಕ್ಟೀಸ್ ಮಾಡೋದು. ಈ ಸರ್ಕಲ್, ಯಾವಾಗಲೂ ಶಾಂತವಾಗಿ ಇರ್‍ತಿತ್ತು. ಒಂಚೂರು ಕೊಳೆ ಕಸಾ ಇರ್‍ತಿರಲಿಲ್ಲ. ಇವರು, ಅದನ್ನು ಕುದುರೆಲಾಯ ಮಾಡಿಬಿಟ್ಟಿದಾರೆ. ನಾವು, ಆಗೀಗ ಅಂಗಡಿ ಇಂದ ಹೊರಗೆಬಂದು, ಅಲ್ಪಸ್ವಲ್ಪ ಕ್ಲೀನ್ ಮಾಡೋಕೆ ಪ್ರಯತ್ನ ಪಡ್ತೀವಿ. ಬರ್‍ತಾ ಬರ್‍ತಾ, ಅದೂ ಕಡಿಮೆ ಆಗ್ತಾ ಇದೆ. ಅದರಿಂದ ಏನೂ ಪ್ರಯೋಜನ ಇಲ್ಲ. ನಮಗೂ ಅಪಾಯ ಜಾಸ್ತಿ. ಅವರ ಕುದುರೆಕಾಲಿಗೆ ಸಿಕ್ಕು ಕೆಳಗೆ ಬೀಳಬೇಕು ಅಥವಾ ಅವರ ಚಾಟೀಏಟು ತಿಂದು ಕೈಯೋ ಕಾಲೋ ಮುರ್‍ಕೋಬೇಕು.
ಈ ಅಲೆಮಾರಿಗಳ ಜತೆ ಮಾತಾಡೋದು ಸಾಧ್ಯವೇ ಇಲ್ಲ. ಅವರಿಗೆ ನಮ್ಮ ಭಾಷೆ ಗೊತ್ತಾಗಲ್ಲ. ಹಾಗೆ ನೋಡಿದೆ, ಅವರಿಗೆ ತಮ್ಮದೇ ಆದ ಭಾಷೆಯೂ ಇಲ್ಲ. ಅವರ ನಡುವಿನ ಸಂಭಾಷಣೆ ಅಂದ್ರೆ, ಕಳ್ಳ ಕಾಗೆಗಳು ಕವಕವ ಅನ್ನೋ ಹಾಗೆ. ಆ ಶಬ್ದ, ಯಾವಾಗಲೂ ಕಿವಿ ಒಳಗೆ ಚೀರ್‍ತಾಇರತ್ತೆ. ನಮ್ಮ ಬದುಕಿನ ರೀತಿ, ಸಂಘ-ಸಂಸ್ಥೆಗಳು, ಇವೆಲ್ಲ ಅವರಿಗೆ ಅರ್‍ಥವಾಗೋದಿಲ್ಲ. ಅವರಿಗೆ ಅರ್‍ಥಮಾಡಿಕೊಳ್ಳೋ ಉದ್ದೇಶವೂ ಇಲ್ಲ. ನೀವು, ಕೈಮುರಿಯೋ ತನಕ ಸನ್ನೆ ಮಾಡಿ, ಗಂಟಲು ಹರಿಯೋ ತನಕ ಶಬ್ದ ಮಾಡಿ. ಏನೂ ಮಾಡಿದರೂ ಅಷ್ಟೆ. ಹೊಳೇಲಿ ಹುಣಿಸೇಹಣ್ಣು ತೊಳೆದ ಹಾಗೆ. ಕೆಲವು ಸಲ, ವಿಕಾರವಾಗಿ ಮುಖ ಮಾಡ್ತಾರೆ. ಕಣ್ಣುಗುಡ್ಡೆ ಹೊರಗಡೆ ಬರತ್ತೆ, ತುಟೀ ಸುತ್ತಲೂ ನೊರೆ ಬರತ್ತೆ. ಆದರೆ, ಅದಕ್ಕೆ ಯಾವ ಅರ್‍ಥವೂ ಇಲ್ಲ. ಅವರು ನಿಮ್ಮನ್ನು ಹೆದರಿಸೋದಕ್ಕೂ ಟ್ರೈ ಮಾಡ್ತಿರಲ್ಲ. ಹಾಗೆ ಮಾಡೋದು ಯಾಕೆ ಅಂದೆ, ಅದು ಅವರ ಸ್ವಭಾವ. ಅಷ್ಟೆ. ಅವರಿಗೆ ಏನು ಬೇಕೋ ಅದನ್ನು ತಗೋತಾರೆ. ಬಲವಂತ ಮಾಡಿದರು, ಅಂತ ಹೇಳೋಕೂ ಅಗಲ್ಲ. ಅವರಿಗೆ ಇಷ್ಟವಾದ್ದಕ್ಕೆ ಕೈ ಹಾಕ್ತಾರೆ. ನೀವು ಸುಮ್ನೆ ನಿಂತ್ಕೊಂಡು ನೋಡ್ತೀರಿ. ಅಲ್ಲೀಗೆ ಮುಗೀತು.
ಅವರು, ನನ್ನ ಅಂಗಡಿಯಿಂದಲೂ ಎಷ್ಟೋ ಐನಾತಿ ಸಾಮಾನು ತಗೊಂಡಿದಾರೆ. ಪಕ್ಕದ ಅಂಗಡೀ ಕಸಾಯಿಯವನ ಪಡಿಪಾಟಲು ನೋಡಿದರೆ, ನಾನೇನೂ ಕಂಪ್ಲೇಂಟ್ ಮಾಡೋಹಾಗಿಲ್ಲ. ಅಂಗಡೀಗೆ ಹೊಸ ಮಾಂಸ ತರೋದೇ ತಡ, ಅವರು ಬಂದು ಅಷ್ಟನ್ನೂ ನುಂಗಿ ನೀರು ಕುಡೀತಾರೆ. ಅವರ ಕುದುರೆಗಳು ಕೂಡ ಮಾಂಸ ಕಂಡರೆ ಬಿಡೋದಿಲ್ಲ. ಎಷ್ಟೋ ಸಲ, ಕುದುರೆ ಮತ್ತು ಮನುಷ್ಯ ಅಕ್ಕಪಕ್ಕ ಬಿದ್ಕೊಂಡು ಒಂದೇ ಚೂರು ಮಾಂಸ ಜಗೀತಾ ಇರ್‍ತಾರೆ. ಆ ತುದಿಯಿಂದ ಮನುಷ್ಯ. ಈ ತುದಿಯಿಂದ ಕುದುರೆ. ಅಂಗಡಿಯೋನು ಪ್ರತಿ ದಿನ ಹೊಸ ಮಾಂಸ ತರಲೇಬೇಕು. ಬೇರೆ ದಾರಿ ಇಲ್ಲ. ಅವನು ಮಾಂಸ ಕೊಳ್ಳೊಕೆ, ನಾವೆಲ್ಲ ಚಂದಾ ಹಾಕಿ ದುಡ್ಡು ಕೊಡ್ತೀವಿ. ಮಾಂಸ ಸಿಗದೇ ಇದ್ರೆ, ಈ ಅಲೆಮಾರಿಗಳು ಏನುಮಾಡ್ತಾರೋ ಯಾರಿಗೆ ಗೊತ್ತು? ಅದಿರಲಿ, ಪ್ರತಿ ದಿನ ಮಾಂಸ ಸಿಕ್ರೂ ಅವರ ತಲೇಲಿ ಏನು ಯೋಚನೆ ಬರತ್ತೋ? ಹೇಗೆ ಹೇಳೋದು??
ಕೆಲವು ದಿನಗಳ ಹಿಂದೆ, ಕಸಾಯಿಯವನು ಒಂದು ಪ್ಲಾನ್ ಮಾಡಿದ. ಮಾಂಸ ಕತ್ತರಿಸೋ ಕೆಲಸ ಆದರೂ ತಪ್ಪಲಿ ಅಂತ, ಒಂದು ದಿನ ಬದುಕಿರೋ ಎತ್ತು ತಂದ. ಸರಿಯಾಗಿ ಬುದ್ಧಿಬಂತು. ಅವನ ಜೀವಮಾನವಿಡೀ ಅಂಥ ಕೆಲಸ ಮಾಡೋದಿಲ್ಲ. ನಾನು ಅಂಗಡಿ ಬಾಗಿಲು ಹಾಕಿ, ಹಿಂದುಗಡೆ ಹೋಗಿ, ಮೂಲೇಲಿ ಬಿದ್ಕೊಂಡೆ. ಕಿವಿ ಸುತ್ತಲೂ ಇರೋಬರೋ ಬಟ್ಟೆ, ಕಂಬಳೀ, ದಿಂಬು. ಎತ್ತಿನ ಕೂಗು ಕೇಳಿಸಿಕೊಳ್ಳದೆ ಇರೋಕೆ ಇಷ್ಟೆಲ್ಲ ಕಸರತ್ತು ಮಾಡಿದ್ರೂ, ಈಗಲೂ ಕೇಳ್ತಾನೇ ಇದೆ. ಅಲೆಮಾರಿಗಳು, ಜೀವಂತವಾದ ಎತ್ತಿನ ಮೇಲೆ ಎಗರ್‍ತಾ ಇದ್ದರು. ಒಂಚೂರು ಮಾಂಸ, ಹಲ್ಲಲ್ಲಿ ಕಿತ್ತುಕೊಳ್ಳೋದು, ಜಗಿಯೋದು ಮತ್ತೆ ಎಗರೋದು. ನಾನು, ಎಷ್ಟೋ ಹೊತ್ತು ಆ ಕಡೆ ತಲೆಹಾಕಲೇ ಇಲ್ಲ. ಆಮೇಲೆ ನೋಡಿದ್ರೆ, ತಿಂದುಮಿಕ್ಕಿದ್ದ ಎತ್ತಿನ ಸುತ್ತ ಎಲ್ಲರೂ ಬಿದ್ಕೊಂಡಿದ್ರು. ಹೆಂಡದ ಖಾಲೀ ಪೀಪಾಯಿ ಸುತ್ತಲೂ ಮಲಗಿರೋ ಕುಡುಕರ ಹಾಗೆ.
ಆಗಲೇ ಇರಬೇಕು. ನಾನು, ಚಕ್ರವರ್‍ತಿಗಳನ್ನು ನೋಡಿದೆ. ನಿಜವಾಗಲೂ. ಅರಮನೆಯ ಕಿಡಕಿ ಹಿಂದೆ ನಿಂತಿದ್ರು. ಹೀಗೆ ಹೊರಗಡೆ ಬರೋದು, ಬಹಳ ಬಹಳ ಅಪರೂಪ. ಸದಾ ಅರಮನೆಯೊಳಗಿನ ಉದ್ಯಾನವನದಲ್ಲೇ ಕಾಲ ಕಳೀತಾರೆ. ಇವತ್ತು ಯಾಕೋ ಬಂದಿದ್ರು ಅಥವಾ ನನಗೆ ಹಾಗೆ ಅನ್ನಿಸಿರಬೇಕು. ಕಿಡಕಿಯಲ್ಲಿ ನಿಂತುಕೊಂಡು, ಮುಂದೆ ಬಾಗಿ, ತನ್ನ ಅರಮನೆಯ ಸುತ್ತಲಿನ ಈ ವಿದ್ಯಮಾನಗಳನ್ನು ಗಮನಿಸ್ತಾ ಇದ್ರು.
"ಇನ್ನು ಮುಂದೆ ಏನಾಗತ್ತೆ?" ಅಂತ, ನಾವೆಲ್ಲರೂ ಕೇಳಿಕೊಳ್ತೀವಿ. "ಈ ಹೊರೆಯನ್ನು, ಈ ಹಿಂಸೆಯನ್ನು ಎಷ್ಟು ದಿನ ತಡ್ಕೊಳ್ಳೊಕೆ ಸಾಧ್ಯ? ಈ ಅಲೆಮಾರಿಗಳು ಇಲ್ಲಿಗೆ ಬರೋದಕ್ಕೆ, ಚಕ್ರವರ್‍ತಿಗಳ ಅರಮನೆಯೇ ಕಾರಣ. ಆದರೆ, ಅವರನ್ನು ಹಿಂದಕ್ಕೆ ಅಟ್ಟೋದು ಹೇಗೆ ಅಂತ ಅವರಿಗೆ ಗೊತ್ತಿಲ್ಲ. ಅರಮನೆಯ ಬಾಗಿಲು ಯಾವಾಗಲೂ ಮುಚ್ಚಿರತ್ತೆ. ರಾಜವೈಭವದಿಂದ, ಹೊರಗೆ ಒಳಗೆ ತಿರುಗಾಡ್ತಿದ್ದ ಕಾವಲುಗಾರರು, ಈಗ ಮುಚ್ಚಿದ ಮುಚ್ಚಿದ ಕಿಡಕಿಗಳ ಹಿಂದೆ ಮರೆಯಾಗಿದಾರೆ. ದೇಶವನ್ನು ಕಾಪಾಡಿಕೊಳ್ಳುವ ಹೊಣೆ, ನಮ್ಮಂತಹ ಚಿಕ್ಕಪುಟ್ಟ ವ್ಯಾಪಾರಿಗಳ ಮೇಲೆ, ಕೆಲಸಗಾರರ ಮೇಲೆ ಬಿದ್ದಿದೆ. ನಮಗೆ ಅಂಥ ಕೆಲಸ ಮಾಡೋ ಶಕ್ತಿ ಇಲ್ಲ. ನಮಗೆ ಅದು ಸಾಧ್ಯ ಅಂತ ನಾವು ಹೇಳಿಯೂ ಇಲ್ಲ. ಇಲ್ಲಿ ಏನೋ ತಪ್ಪು ತಿಳಿವಳಿಕೆ ಇದೆ. ಇದರಿಂದ ನಾವೆಲ್ರೂ ನಾಶವಾಗ್ತೀವಿ."    
ಫ್ರಾಂಜ್ ಕಾಫ್ಕಾ, ೧೯೧೭






Monday, August 27, 2012

'Preethi Mruthyu Bhaya' -A review of Prof U.R.Ananthamyrthy's novel, (Published in 'The Hindu' on 24-08-2012')


Preethi Mruthyu Bhaya

The publication of this novel, written in 1959 and resurrected accidentally has generated considerable interest among the cognoscenti, because of its historical significance as well as its contemporary relevance, even though the former would be restricted to academics. The introductory remarks by the author describe the novel as a creative attempt aimed at purgation from the trauma caused by intense experiences such as death and love as also the emotional and intellectual responses released by them. It delineates the journeys undertaken by Shekhara into his past and the inner recesses of his psyche. It deals also with the alienation of the protagonist from his social and familial moorings; it interrogates his relationship with Shyamala – is it physical, is it ideological or is it love itself. However, this oft repeated theme acquires an added dimension because the novelist perceives the problem as cutting across generations and cultural idiosyncrasies.
Ananthamurthy, among the most important writers of our times, has maintained a critical distance from the protagonist. This is the portrayal of a predicament rather than a worldview. Shekhar’s inability to understand the inner compulsions of other characters and the consequent intolerance should be perceived as lacunae introduced by the novelist himself. The interface that is created among primal forces such as love, death and fear leads to the evolution of Shekhar’s psyche. The sudden death of his younger brother propels him to transcend his limitations and make the ‘right’ choices. He feels that his relatives and friends are denied this privilege because they are sentimental and exploitative. This of course is typical of the Navya (Modernist) writing.
Hatred and intolerance often borne by ‘sensitive’ persons towards an ‘insensitive’ world result in various reaction patterns such as renunciation, struggle, masochism, compromise, resignation and unwilling participation. Shekhara exhibits all of them at various junctures in the novel. His self righteousness is tempered by an untold respect for others and a genuine awareness of his limitations. Surprisingly, his ire is directed more at his mother and other women in his life, rather than male characters with whom he vibes reasonably well. Most of these characters serve a functional purpose – they foster the evolution of Shekhara.
The novel employs the stream of conscious technique with certain modifications. Chronological narration makes way for discrete units of experience that are held together by emotional and cerebral continuum created in the protagonist. The novel may not satisfy your artistic expectations, but its disarming honesty and intensity captivates the reader.
This novel is historically important for two reasons. Firstly, it contains within itself the birth pangs of the modernist fiction in Kannada. It illustrates the process of transition from the realistic modes of structuring and narration to the modernist mode which is characterised by panache for poetic quality, foregrounding the narrative and relegating the story to the background, and being richly symbolic.
Secondly, this novel contains many major preoccupations of Anathamurthy’s oeuvre in their embryonic form. This represents a stage at which the individual and the family are at the nucleus and society forms a peripheral backdrop. Later on, Ananthamurthy focused on the philosophical and socio-political dimensions of life, although never at the cost of sacrificing the sanctity of individuals. In celebrated classics such as “Samskara’ and “Avasthe’, an artistic merger of these concerns is manifested very competently and artistically. The intellectual positions taken in this novel are genuine because the author was bothered neither by a desire to be politically right nor by inner compulsions to cater to the reading public. The fact that the novel ends rather abruptly may also indicate the tentative nature of author’s ideological positions at that temporal juncture.
However, the significance of this work lies in the fact that it reflects on the angst indigenous to youth. However, the travails undergone by other age groups, as furtherance to what sets in during youthful years are given ample representation. It creates a sombre and contemplative mood in its readers. It could become a perennial favourite, it is sure to evoke similar responses in decades to come because it addresses issues that are relevant for all time.

                                                                                      H.S. Raghavendra Rao  
This is a review of Prof U.R. Ananthamurthy's latest novel, published on 24-08-12 in ‘The Hindu’  

Wednesday, August 8, 2012

ಜೀವನಾನಂದದಾಸ್ ಅವರ ಕವಿತೆಗಳು


ಬಂಗಾಳೀ ಭಾಷೆಯ ಹಿರಿಯ ಕವಿ ಜೀವನಾನಂದದಾಸ್(1899-1954) ಅವರ ಮೂರು ಕವಿತೆಗಳ ಅನುವಾದಗಳನ್ನು ಇಲ್ಲಿ ಕೊಟ್ಟಿದ್ದೇನೆ. ಇವರು ಸರಿಸುಮಾರು ನಮ್ಮ ಬೇಂದ್ರೆ ಮತ್ತು ಕುವೆಂಪು ಅವರ ಸಮಕಾಲೀನರು. ಬಹು ಮುಖ್ಯವಾದ ಕವಿತೆಗಳನ್ನು ಬರೆದವರು. ನಾನು ಈ ಅನುವಾದಗಳನ್ನು ಮಾಡಿ ದಶಕಗಳೇ ಕಳೆದವು. ಮೊದಲಸಲ ಇಲ್ಲಿ ಕೊಡುತ್ತಿದ್ದೇನೆ.

ನೀಲಿಮ ಗಗನ ವಿತಾನ
       
        ಹೊಳೆಬೆಳಕನು ತುಳುತುಳುಕುವ ಉದಯದ ಮುಗಿಲೇ,
        ನಡು ಇರುಳಿನ ಕಡುನೀಲಿಯೆ, ಕೊನೆಯಿಲ್ಲದ ಚೆಲುವೆ
        ಮರಮರಳಿಯು ನೀ ಕಾಣುವೆ ಈ ನಗರದ ಮೇಲೆ
        ಗತಿಯಿಲ್ಲದ ಈ ನಗರದ ಸೆರೆಗೋಡೆಯ ಮೇಲೆ

        ಇಲ್ಲಿ ಹರಿಯುವುದು ಹೊಗೆಹಾವಿನ ನುಲಿನುಲಿಯುವ ನೀಲಿ
        ಅನ್ನವು ಬೇಯುವ, ಒಡಲಬೇಗೆಗಳ ಸುಡುಬೆಂಕಿಯ ಬೇಲಿ
        ಮರುಭೂಮಿಯ ಬಿಸಿಯುಸಿರಲಿ ಮಿಂದಿಹ ಕೆಂಗಲ್ಲು
        ಅದಕಿರುವುದು ಬಿಸಿಲ್ಗುದುರೆಯ ಇಲ್ಲದ ನೀರ್‌ಚೆಲ್ಲು
       
        ಹುಡುಕುವ ತಡಕುವ ಬಿಡುಗಡೆ ಕಾಣದ ಯಾತ್ರಿಕ ಹೃದಯ
        ಕಾಲನು ಕಟ್ಟಿಹ ಸಂಪ್ರದಾಯಗಳ ಬೇಡಿಗೆ ಇಲ್ಲ ದಯ
        ಎವೆ ಮಿಟುಕದ ನೀಲಾಗಸವೇ, ಮಾಂತ್ರಿಕ ನೀನು
        ಮಾಂತ್ರಿಕದಂಡದಿ ಒಡೆದು ತೆಗೆದಿರುವೆ ಈ ಜೈಲಿನ ಬಾಗಿಲನು

        ಈ ಜನಗಳ ಈ ಗಲಭೆಯ ನಡುವೆಯೆ ನಾ ಮೌನಿ
        ನೀ ಹೆಣೆದಿಹ ಮಾಂತ್ರಿಕಬಲೆ ಗುಟ್ಟುಗಳದೆ ಧ್ಯಾನಿ
        ಯಾವುದೊ ದೂರದ ನಿಗೂಢ ತಾಣದಿ ಬಲೆ ಹೆಣೆಯುವೆ ಜಾಣ
        ವಾಸ್ತವಲೋಕದ ರಕ್ತಿಮ ದಡಕ್ಕೆ ನಿನ್ನಯ ಆಗಮನ.

        ಹರಳು ಬೆಳಕುಗಳ ಹರಹಿನ ಮೇಲಕೆ ನಿನ್ನ ನೀಲಿ  ಹೊದಿಕೆ
        ಮಾತನೆ ಮರೆತಿಹ ಕನಸಿನ ನವಿಲಿನ ರೆಕ್ಕೆಯು ಸಮ ಅದಕೆ
        ಕಿರಾತಖಂಡಿತ ಧರೆರಕ್ತದ ಕಲೆ ಮರೆತಿವೆ ಕಣ್ಣು
        ಕಡೆಯಿಲ್ಲದ ಬಾನಿನ ಕಡೆ ನೆಗೆದಿದೆ ದೀಪದ ಹೂಕಣ್ಣು

        ಗಳಿತ ವಸ್ತ್ರಗಳ ಪಲಿತ ಮುಂಡಗಳ ಭಿಕ್ಷುಗಳದೆ ಸರಣಿ
        ಹಾದಿಯೊ ನಿಷ್ಕರುಣಿ.
       
        ಸಾಯಲು ನಡೆದಿಹ ಲಕ್ಷ ಲಕ್ಷಜನ ತುಂಬಿದ ಈ ಜೈಲು
        ಕತ್ತಲ ಸುತ್ತಲು ಹೊಗೆಯ ಮುಸುಕಿಹುದು ಈ ಧೂಳು
        ಎಲ್ಲ ಮುಳುಗುವುವು ನೀಲ ನಭದಲ್ಲಿ ಹಲವು ಹತ್ತು ಬಾಳು
        ಸ್ವಪ್ನ ವಿಸ್ತರಿತ, ಭಯ ವಿಹ್ವಲಿತ ಕಣ್ಣಿನ ಮನೆಪಾಲು

        ಚಿಕ್ಕೆಬೆಳಕಿರುವ ಹೊಳೆಯುವ ಬಾನಿನ ಕಡುಬಿಳಿ ಮೋಡಗಳ  ಮಡಿಲೊಳಗೆ
       
        ನಿದ್ದೆಯನರಿಯದ ನವಿರಿನ ಲೋಕವೆ ನಿನ್ನ ಅಂಜುಸ್ಪರ್ಶ
        ಇದೊ ಒಡೆದಿದೆ ಕ್ರಿಮಿಸಮ ಭೂಮಿಯ ಒಣಗಿದ ಕೋಶ.


                                             ಬೇಟೆ

        ಮುಂಜಾನೆ:
        ಆಕಾಶ, ಸೂರ್‍ಯನಕುದುರೆಯ ಕೆಳಹೊಟ್ಟೆಯ ಮೃದುನೀಲಿ,
        ಸುತ್ತಲೂ ಸೀಬೆಯ, ಸೀತಾಫಲದ ಮರಗಳು, ಗಿಳಿಗರಿ ಹಸಿರು
        ಉಳಿದಿರುವ ಒಂಟಿ ತಾರೆ
        ಯಾವುದೋ ಹಳ್ಳಿಯ, ಮದುವೆಮಂಚದ ರತಿಚಕಿತ ಹುಡುಗಿಯ ಹಾಗೆ
        ಅಥವಾ,
        ಸಾವಿರ ಸಂವತ್ಸರದಾಚೆ ಆ ಈಜಿಪ್ಷಿಯನ್ ಹುಡುಗಿ
        ನನ್ನ ನೈಲ್-ನೀಲಿ ದ್ರಾಕ್ಷಾರಸದ ಬಟ್ಟಲಿನಲ್ಲಿ
        ಅದ್ದಿದ ಎದೆ ನಡುವಿನ ಹವಳದ ಹಾಗೆ
        ಹಾಗೆ ಮಿರುಗಿದೆ ಈ ಗಗನದಲ್ಲಿ ಒಂಟಿ ನಕ್ಷತ್ರ.

        ಬಯಲುಸೀಮೆಯಿಂದ ಬಂದ ಕೂಲಿಕಾರರು
        ಶೀತಲ ರಾತ್ರಿಯಲ್ಲಿ ಉರಿಸುತ್ತಿರುವ ಗುಲ್‌ಮೊಹರ್ ಬೆಂಕಿ
        ಇನ್ನೂ ಉರಿಯುತ್ತಿದೆ,
        ಒಣಗಿದ ಅರಳಿಯ ಎಲೆಗಳಿಗೆ ಹೊಸಹೊಸ ಆಕಾರ.
        
        ಸೂರ್ಯನ ಬೆಳಕಿನಲ್ಲಿ ಈಗ, ಅದು ಕುಂಕುಮಕೆಂಪಲ್ಲ.
        ರೋಗಗ್ರಸ್ತ ಪಕ್ಷಿಯ ಹೃದಯದ, ಕರಗುವ ಬಯಕೆಯ ನಸುಹಸಿರು
        ಹಗಲಿನ ಬೆಳಕಿನಲ್ಲಿ ಆಕಾಶ ಮತ್ತು ಮಂಜು ತುಂಬಿದ ಕಾಡುಗಳು
        ಹೊಳೆಯುತ್ತಿವೆ,
        ನವಿಲುರೆಕ್ಕೆಯ ಹಾಗೆ.
         ಮುಂಜಾನೆ:
        ರಾತ್ರಿಯೆಲ್ಲಾ ಒಂದು
        ಚಪಲ ಚಂಚಲ ಕಂದು ಪುರುಷ ಹರಿಣ
        ಓಡಿದೆ, ನೆಗೆದಿದೆ,
        ಸುಂದರಿಯಿಂದ ಅರ್ಜುನ ಅರಣ್ಯದ
        ಚಿಕ್ಕೆಯಿಲ್ಲದ ಕಡುಗಪ್ಪು ರಾತ್ರಿಯಲ್ಲಿ
        ಸಿಕ್ಕಕೂಡದು ಚಿರತೆ ತೆಕ್ಕೆಯಲ್ಲಿ.

        ಅವನ ನಿರೀಕ್ಷೆಯೂ ಈ ಹಗಲಿಗಾಗಿ
        ಅದರ ಬೆಳಕಿನ ಒಡಲು ಅವನ ಹಾದಿ
        ಇಗೊ ಬಂದ
        ಹಸಿ ಹಸಿರು ಹುಲ್ಲುಗರಿ ಹಲ್ಲುಗಳ ನಡುವೆ
        ಹಸಿರು ದ್ರಾಕ್ಷಿಯ ಹಣ್ಣು ಹಸಿರು ಹೀಗೆ
        ಇಗೊ ಅವನು ಬಂದ
        ನದಿನೀರಿನ ಸುಡು ಶೀತಲ ಆಲೆಗಳ ಕಡೆಗೆ
        ಎವೆ ಮುಚ್ಚದೆ ಬಳಬಳಲಿದ ನಸು ಬೆಚ್ಚಿದ,
        ಬೆವರೊಡೆದ ದೇಹವನ್ನು
        ಹರಿಯುವ ಹೊಳೆಯಲಿ ಮುಳುಗಿಸಿ ಮೈಮರೆಯುವ ಕಡೆಗೆ
        ರಾತ್ರಿಯ ರಸರಹಿತ ಶೀತಲ ಗರ್ಭದಿಂದ
        ಹಗಲು ಜಿಗಿಯುವ ರೋಮಾಂಚನಕ್ಕೆ ವಶವಾಗುವ ಬಯಕೆ
        ಈ ನೀಲಿಯ ಕೆಳಗೆ, ಬಂಗಾರದ ಸೂರ್‍ಯಶಲಾಕೆಯಂತೆ ಚಿಮ್ಮಿದರೆ
        ಆ ಶಕ್ತಿಗೆ ಆ ಚೆಲುವಿಗೆ ಆ ಬಯಕೆಗೆ ಮೈಮರುಳು
        ಹರಿಣಿ ಹರಿಣಿ ಹರಿಣಿ.

        ಅಪರಿಚಿತ ಸದ್ದು.
        ನದಿಯ ನೀರು ಹಾಲವಾಣದ ಹೂಕೆಂಪು
        ಮತ್ತೊಮ್ಮೆ ಬೆಂಕಿಕಿಡಿ ಸಿಡಿತ
        ಬಿಸಿಬಿಸಿ ಬಡಿಸಿದ ಜಿಂಕೆಯ ಮೈಮಾಂಸ
       
        ನಕ್ಷತ್ರಗಳ ಕೆಳಗೆ, ಹುಲ್ಲುಹಾಸಿನ ಮೇಲೆ
        ಹಳೆಯ ಬೇಟೆಗಳ ಮಂಜುಮರೆ ಕಥೆಗಳು,
        ಸಿಗರೇಟಿನ ಹೊಗೆ,
        ಅನೇಕ ಮನುಷ್ಯರು, ನೀಟಾಗಿ ತೆಗೆದ ಬೈತಲೆ.
        ಅಲ್ಲಿ ಇಲ್ಲಿ ಬಂದೂಕುಗಳು.
        ಶಾಂತ, ಶೀತಲ, ಅಳುಕಿಲ್ಲದ ನಿದ್ದೆ.
                                                ಮೂಲ ಬಂಗಾಳಿ: ಜೀವನಾನಂದ ದಾಸ್(೧೮೯೯-೧೯೫೪)
                                                ಇಂಗ್ಲಿಷ್ ಅನುವಾದ: ಕ್ಲಿಂಟನ್ ಬಿ. ಸೀಲಿ
                                                         



ಶಿಬಿರದಲ್ಲಿ.....

                                                                                                                                                                               
        ಇಲ್ಲಿ, ಈ ಕಾಡಿನಂಚಿನಲ್ಲಿ ನನ್ನ ಟೆಂಟ್ ಮತ್ತು ನಾನು.
        ರಾತ್ರಿಯೆಲ್ಲಾ ಬಿಡದೆ, ತೆಂಕಣಗಾಳಿಯ ತಂಪು ತೆಕ್ಕೆಯಲ್ಲಿ
        ಬೆಳುದಿಂಗಳ ಒಡಲಿನಲ್ಲಿ
        ಎಡೆಬಿಡದೆ ಕೇಳಿಸಿದೆ ಬೆದೆ ಬಂದ ಜಿಂಕೆಯ ಕೂಗು
        ಅವಳು ಕರೆಯುವುದು ಯಾರಿಗಾಗಿ?

        ಈ ರಾತ್ರಿ ಎಲ್ಲೋ ಜಿಂಕೆಗಳ ಬೇಟೆ ನಡೆಯುತ್ತದೆ.
        ಈ ದಿನ ಬೇಟೆಗಾರರು ಕಾಡಿನೊಳಹೊಕ್ಕರು.
        .....ಅವುಗಳ ವಾಸನೆ ಹಿಡಿಯಲೆಂದು.
        ಇಲ್ಲಿ ನಾನು ಹೀಗೆ ಮಲಗಿದ್ದೇನೆ ಹಾಸಿಗೆಯ ಮೇಲೆ
        ನಿದ್ದೆಯ ಸುಳಿವೂ ಇಲ್ಲ
         ಈ ರಾತ್ರಿ, ವಸಂತದಲ್ಲಿ
       
        ಎಲ್ಲೆಲ್ಲೂ ಕಾಡಿನ ಬೆರಗು       
        ಬೆಳುದಿಂಗಳ ರುಚಿ ತುಂಬಿದ
        ವೈಶಾಖದ ಗಾಳಿ
        ಬೆದೆಹದದ ಜಿಂಕೆದನಿ ಇರುಳ ತುಂಬಾ.
        ನಡುಕಾಡಿನೊಡಲೊಳಗೆ
        -ಬೆಳುದಿಂಗಳ ನಿಲುಕಿನಾಚೆ-
        ಹರಿಣಗಳ ಕಿವಿ ನಿಗುರು ರೋಮ ನಿಮಿರು.
        ಅವಳ ಇರವನು ತಿಳಿದು,
        ಚಲಿಸಿದವು ಹರಿಣ.
       
        ಈಗ, ಈ ಬೆರಗು ತುಂಬಿದ ಇರುಳಿನಲ್ಲಿ
        ಬಂದಿದೆ ಅವುಗಳ ರತಿಸಮಯ
        ಕರೆಯುತ್ತಿದೆ ಗೆಳತಿಯ ಹೃದಯ.
        ಕಾಡಿನ ಮುಸುಕಿನ ಬೆಳುದಿಂಗಳ ನಸುಕಿನ ಅಭಯ.
        ದಾಹ ತೀರಿಸಿಕೊ, ಮೂಸು, ಮೈಕವಿ, ಸವಿ
        ವ್ಯಾಘ್ರಭಯರಹಿತ ಎನುವಂತೆ ಈ ರಾತ್ರಿ ನಮ್ಮದಿದು ಅಡವಿ.
       
        ಹರಿಣಗಳ ಹೃದಯ, ಈ ರಾತ್ರಿ ನಿರ್ಭಯ
        ಆತಂಕ ತಳ್ಳಂಕ ಇಲ್ಲ ಈ ತನಕ.
        ಇರುವುದೊಂದೇ ಒಂದು, ದಾಹ
        ಏನೆಂಥ ಮೈಪುಲಕ ಆಹ!
       
        ಚಿರತೆಗಳ ಎದೆಯಲ್ಲು ಇರಬಹುದು ರೋಮಾಂಚನ
        ಹರಿಣಿಚೆಲುವಿನ ಬೆರಗು ತುಂಬಿರುವ ನಯನ.
        ಕಾಮ ಕೆರಳುತ್ತದೆ, ಬಯಕೆ ಅರಳುತ್ತದೆ, ಕನಸು ಚಿಮ್ಮುತ್ತವೆ ಈ ರಾತ್ರಿ
        ಸುಗ್ಗಿ ತುಂಬಿದ ವನದ ಧಾತ್ರಿ.
       
        ಒಂದು, ಇನ್ನೊಂದು, ಅಗೊ ಅಗೊ ಮತ್ತೊಂದು, ಕಾಡು ಸೀಳುತ ಬಂತು ಜಿಂಕೆ ಸರಣಿ
        ನೀರ ಸಪ್ಪಳ ಹಿಂದೆ, ಬೇಕೀಗ ತರುಣಿ, ಬೆದೆ ಮರುಳು ಹರಿಣಿ.
        ಹಲ್ಲು ಮರೆತು, ಉಗುರು ಮರೆತು ಎಲ್ಲ ಮರೆತು ಅವಳ ಹೊರತು
        ಜೊನ್ನದಲ್ಲಿ ಮಿಂದು ಬಂದ ಸುಂದರಿ ನದಿ ಕುರಿತು.
        ಗಂಡು ಚಲಿಸುವಂತೆ ತನ್ನ ಉಪ್ಪುಹುಡುಗಿ ಕಡೆಗೆ,              
        ಬಂದವು ಈ ಜಿಂಕೆ.

        ಇಗೊ ನನಗೆ ವೇದ್ಯ:
        ಅವುಗಳ ಗೊರಸುಗಳ ನೂರು ದನಿ,
        ಹೆಣ್ಣು ಜಿಂಕೆಯ ಬೆದೆನರಳು ದನಿ,
        ನಾನಿನ್ನು ನಿದ್ರಿಸಲಾರೆ.
        ಇಲ್ಲಿ ಮಲಗಿರುವಂತೆ, ಅಲ್ಲಿ ಗುಂಡಿನ ಸದ್ದು
        ಮತ್ತೆ ಅದೊ ಕೇಳುತಿವೆ, ಭಯಚಕಿತ ಸದ್ದು.
        ಬೆಳುದಿಂಗಳ ನಡುವೆ, ಆ ಹರಿಣಿ ಇನ್ನೊಮ್ಮೆ ಕರೆದಿದೆ
        ನಾನಿಲ್ಲಿ ಬಿದ್ದಿರುವೆ ಒಂಟಿಯಾಗಿ.

        ಬಂದೂಕುಗಳ ಗುಡುಗು ಕೇಳಿದಾಗ
        ಹೆಣ್ಣು ಜಿಂಕೆಯ ಕೊರಳು ಕೂಗಿದಾಗ
        ನನ್ನ ಹೃದಯವನ್ನು ದಣಿವು ತುಂಬುತ್ತದೆ.

        ನಾಳೆ ಅವಳು ಮರಳುತ್ತಾಳೆ
        ಇರುಳಿಲ್ಲದ ಹಗಲಿನಲ್ಲಿ ಕಾಣುತ್ತಾಳೆ
        ಅವಳ ಸುತ್ತಲು ಸತ್ತ ಪ್ರಿಯತಮರ ಹೆಣರಾಶಿ.
        ಮನುಷ್ಯರು ಅವಳಿಗೆ ಇದನ್ನೆಲ್ಲ ಕಲಿಸಿದ್ದಾರೆ.