Friday, August 31, 2012

ಹಳೆಯ ಹಸ್ತಪ್ರತಿ - ಕಾಫ್ಕಾ ಬರೆದ ಅಪೂರ್ಣ ಕಥೆ



ಹಳೆಯ ಹಸ್ತಪ್ರತಿ
ಹೌದು. ದೇಶವನ್ನು ಕಾಪಾಡಿಕೊಳ್ಳೋದು ಹೇಗೆ ಅಂತ ನಮಗೆ ಗೊತ್ತಿಲ್ಲ. ಉಡಾಫೆಯಲ್ಲೇ ಕಾಲ ಕಳೆದುಹೋಯ್ತು. ಇಲ್ಲಿಯ ತನಕ ಅದರ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ. ದಿನದಿನದ ಕೆಲಸಗಳಲ್ಲಿ ಮುಳುಗಿಬಿಟ್ಟಿದ್ವಿ. ಆದರೆ, ಈಚೆಗೆ ಆಗ್ತಾ ಇರೋ ಘಟನೆಗಳು ಮನಸ್ಸು ಕೆಡಿಸೋದಕ್ಕೆ ಶುರುಮಾಡಿವೆ.
ನಾನು ಚಮ್ಮಾರ. ನನ್ನ ಅಂಗಡಿ, ಅರಮನೆ ಎದುರುಗಡೆ ಇರೋ ಚೌಕದಲ್ಲಿದೆ. ದಿನಾ ಬೆಳಿಗ್ಗೆ ಸೂರ್‍ಯ ಹುಟ್ಟೋ ಹೊತ್ತಿಗೆ, ಅಂಗಡಿ ಬಾಗಿಲು ತೆಗೀತೀನಿ. ಅಷ್ಟು ಹೊತ್ತಿಗಾಗಲೇ, ಸರ್‍ಕಲ್ಲಿಗೆ  ಬರೋ ಎಲ್ಲಾ ದಾರಿಗಳೂ ಬಂದ್. ಎಲ್ಲಿ ನೋಡಿದ್ರೂ ಸೈನಿಕರೇ ಕಾಣಿಸ್ತಾರೆ, ಅವರು ನಮ್ಮ ಸೈನಿಕರಲ,. ಉತ್ತರದೇಶದಿಂದ ಬಂದಿರೋರು ಅಂತ, ನೋಡಿದಕೂಡಲೇ ಗೊತ್ತಾಗತ್ತೆ. ರಾಜಧಾನಿ, ಗಡಿ ಪ್ರದೇಶದಿಂದ ಅಷ್ಟು ದೂರ ಇದೆ. ಆದರೂ ಇವರೆಲ್ಲಾ ನಮ್ಮ ನಡುವೆ ಬಂದುಬಿಟ್ಟಿದಾರೆ. ಅಷ್ಟೇ ಅಲ್ಲ, ದಿನೇ ದಿನೇ, ಅವರ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಹೇಗೆ ಅಂತ ನನಗಂತೂ ಅರ್‍ಥವಾಗ್ತಿಲ್ಲ.  
ಅದು ಅವರ ಸ್ವಭಾವ. ಅವರಿಗೆ, ಜನ ವಾಸ ಮಾಡೋ ಮನೆಗಳು ಅಂದರೆ ದ್ವೇಷ. ನೀಲಿ ಆಕಾಶದ ಕೆಳಗೆ ಟೆಂಟ್ ಹಾಕಿಕೊಂಡು, ಜೀವನ ನಡೆಸ್ತಾರೆ. ಮೂರು ಹೊತ್ತೂ ಅದೇ ಕೆಲಸ. ಕತ್ತಿ ಸಾಣೆಹಿಡಿಯೋದು, ಬಾಣಾ ಚೂಪುಮಾಡೋದು, ಕುದುರೆಸವಾರಿ ಪ್ರಾಕ್ಟೀಸ್ ಮಾಡೋದು. ಈ ಸರ್ಕಲ್, ಯಾವಾಗಲೂ ಶಾಂತವಾಗಿ ಇರ್‍ತಿತ್ತು. ಒಂಚೂರು ಕೊಳೆ ಕಸಾ ಇರ್‍ತಿರಲಿಲ್ಲ. ಇವರು, ಅದನ್ನು ಕುದುರೆಲಾಯ ಮಾಡಿಬಿಟ್ಟಿದಾರೆ. ನಾವು, ಆಗೀಗ ಅಂಗಡಿ ಇಂದ ಹೊರಗೆಬಂದು, ಅಲ್ಪಸ್ವಲ್ಪ ಕ್ಲೀನ್ ಮಾಡೋಕೆ ಪ್ರಯತ್ನ ಪಡ್ತೀವಿ. ಬರ್‍ತಾ ಬರ್‍ತಾ, ಅದೂ ಕಡಿಮೆ ಆಗ್ತಾ ಇದೆ. ಅದರಿಂದ ಏನೂ ಪ್ರಯೋಜನ ಇಲ್ಲ. ನಮಗೂ ಅಪಾಯ ಜಾಸ್ತಿ. ಅವರ ಕುದುರೆಕಾಲಿಗೆ ಸಿಕ್ಕು ಕೆಳಗೆ ಬೀಳಬೇಕು ಅಥವಾ ಅವರ ಚಾಟೀಏಟು ತಿಂದು ಕೈಯೋ ಕಾಲೋ ಮುರ್‍ಕೋಬೇಕು.
ಈ ಅಲೆಮಾರಿಗಳ ಜತೆ ಮಾತಾಡೋದು ಸಾಧ್ಯವೇ ಇಲ್ಲ. ಅವರಿಗೆ ನಮ್ಮ ಭಾಷೆ ಗೊತ್ತಾಗಲ್ಲ. ಹಾಗೆ ನೋಡಿದೆ, ಅವರಿಗೆ ತಮ್ಮದೇ ಆದ ಭಾಷೆಯೂ ಇಲ್ಲ. ಅವರ ನಡುವಿನ ಸಂಭಾಷಣೆ ಅಂದ್ರೆ, ಕಳ್ಳ ಕಾಗೆಗಳು ಕವಕವ ಅನ್ನೋ ಹಾಗೆ. ಆ ಶಬ್ದ, ಯಾವಾಗಲೂ ಕಿವಿ ಒಳಗೆ ಚೀರ್‍ತಾಇರತ್ತೆ. ನಮ್ಮ ಬದುಕಿನ ರೀತಿ, ಸಂಘ-ಸಂಸ್ಥೆಗಳು, ಇವೆಲ್ಲ ಅವರಿಗೆ ಅರ್‍ಥವಾಗೋದಿಲ್ಲ. ಅವರಿಗೆ ಅರ್‍ಥಮಾಡಿಕೊಳ್ಳೋ ಉದ್ದೇಶವೂ ಇಲ್ಲ. ನೀವು, ಕೈಮುರಿಯೋ ತನಕ ಸನ್ನೆ ಮಾಡಿ, ಗಂಟಲು ಹರಿಯೋ ತನಕ ಶಬ್ದ ಮಾಡಿ. ಏನೂ ಮಾಡಿದರೂ ಅಷ್ಟೆ. ಹೊಳೇಲಿ ಹುಣಿಸೇಹಣ್ಣು ತೊಳೆದ ಹಾಗೆ. ಕೆಲವು ಸಲ, ವಿಕಾರವಾಗಿ ಮುಖ ಮಾಡ್ತಾರೆ. ಕಣ್ಣುಗುಡ್ಡೆ ಹೊರಗಡೆ ಬರತ್ತೆ, ತುಟೀ ಸುತ್ತಲೂ ನೊರೆ ಬರತ್ತೆ. ಆದರೆ, ಅದಕ್ಕೆ ಯಾವ ಅರ್‍ಥವೂ ಇಲ್ಲ. ಅವರು ನಿಮ್ಮನ್ನು ಹೆದರಿಸೋದಕ್ಕೂ ಟ್ರೈ ಮಾಡ್ತಿರಲ್ಲ. ಹಾಗೆ ಮಾಡೋದು ಯಾಕೆ ಅಂದೆ, ಅದು ಅವರ ಸ್ವಭಾವ. ಅಷ್ಟೆ. ಅವರಿಗೆ ಏನು ಬೇಕೋ ಅದನ್ನು ತಗೋತಾರೆ. ಬಲವಂತ ಮಾಡಿದರು, ಅಂತ ಹೇಳೋಕೂ ಅಗಲ್ಲ. ಅವರಿಗೆ ಇಷ್ಟವಾದ್ದಕ್ಕೆ ಕೈ ಹಾಕ್ತಾರೆ. ನೀವು ಸುಮ್ನೆ ನಿಂತ್ಕೊಂಡು ನೋಡ್ತೀರಿ. ಅಲ್ಲೀಗೆ ಮುಗೀತು.
ಅವರು, ನನ್ನ ಅಂಗಡಿಯಿಂದಲೂ ಎಷ್ಟೋ ಐನಾತಿ ಸಾಮಾನು ತಗೊಂಡಿದಾರೆ. ಪಕ್ಕದ ಅಂಗಡೀ ಕಸಾಯಿಯವನ ಪಡಿಪಾಟಲು ನೋಡಿದರೆ, ನಾನೇನೂ ಕಂಪ್ಲೇಂಟ್ ಮಾಡೋಹಾಗಿಲ್ಲ. ಅಂಗಡೀಗೆ ಹೊಸ ಮಾಂಸ ತರೋದೇ ತಡ, ಅವರು ಬಂದು ಅಷ್ಟನ್ನೂ ನುಂಗಿ ನೀರು ಕುಡೀತಾರೆ. ಅವರ ಕುದುರೆಗಳು ಕೂಡ ಮಾಂಸ ಕಂಡರೆ ಬಿಡೋದಿಲ್ಲ. ಎಷ್ಟೋ ಸಲ, ಕುದುರೆ ಮತ್ತು ಮನುಷ್ಯ ಅಕ್ಕಪಕ್ಕ ಬಿದ್ಕೊಂಡು ಒಂದೇ ಚೂರು ಮಾಂಸ ಜಗೀತಾ ಇರ್‍ತಾರೆ. ಆ ತುದಿಯಿಂದ ಮನುಷ್ಯ. ಈ ತುದಿಯಿಂದ ಕುದುರೆ. ಅಂಗಡಿಯೋನು ಪ್ರತಿ ದಿನ ಹೊಸ ಮಾಂಸ ತರಲೇಬೇಕು. ಬೇರೆ ದಾರಿ ಇಲ್ಲ. ಅವನು ಮಾಂಸ ಕೊಳ್ಳೊಕೆ, ನಾವೆಲ್ಲ ಚಂದಾ ಹಾಕಿ ದುಡ್ಡು ಕೊಡ್ತೀವಿ. ಮಾಂಸ ಸಿಗದೇ ಇದ್ರೆ, ಈ ಅಲೆಮಾರಿಗಳು ಏನುಮಾಡ್ತಾರೋ ಯಾರಿಗೆ ಗೊತ್ತು? ಅದಿರಲಿ, ಪ್ರತಿ ದಿನ ಮಾಂಸ ಸಿಕ್ರೂ ಅವರ ತಲೇಲಿ ಏನು ಯೋಚನೆ ಬರತ್ತೋ? ಹೇಗೆ ಹೇಳೋದು??
ಕೆಲವು ದಿನಗಳ ಹಿಂದೆ, ಕಸಾಯಿಯವನು ಒಂದು ಪ್ಲಾನ್ ಮಾಡಿದ. ಮಾಂಸ ಕತ್ತರಿಸೋ ಕೆಲಸ ಆದರೂ ತಪ್ಪಲಿ ಅಂತ, ಒಂದು ದಿನ ಬದುಕಿರೋ ಎತ್ತು ತಂದ. ಸರಿಯಾಗಿ ಬುದ್ಧಿಬಂತು. ಅವನ ಜೀವಮಾನವಿಡೀ ಅಂಥ ಕೆಲಸ ಮಾಡೋದಿಲ್ಲ. ನಾನು ಅಂಗಡಿ ಬಾಗಿಲು ಹಾಕಿ, ಹಿಂದುಗಡೆ ಹೋಗಿ, ಮೂಲೇಲಿ ಬಿದ್ಕೊಂಡೆ. ಕಿವಿ ಸುತ್ತಲೂ ಇರೋಬರೋ ಬಟ್ಟೆ, ಕಂಬಳೀ, ದಿಂಬು. ಎತ್ತಿನ ಕೂಗು ಕೇಳಿಸಿಕೊಳ್ಳದೆ ಇರೋಕೆ ಇಷ್ಟೆಲ್ಲ ಕಸರತ್ತು ಮಾಡಿದ್ರೂ, ಈಗಲೂ ಕೇಳ್ತಾನೇ ಇದೆ. ಅಲೆಮಾರಿಗಳು, ಜೀವಂತವಾದ ಎತ್ತಿನ ಮೇಲೆ ಎಗರ್‍ತಾ ಇದ್ದರು. ಒಂಚೂರು ಮಾಂಸ, ಹಲ್ಲಲ್ಲಿ ಕಿತ್ತುಕೊಳ್ಳೋದು, ಜಗಿಯೋದು ಮತ್ತೆ ಎಗರೋದು. ನಾನು, ಎಷ್ಟೋ ಹೊತ್ತು ಆ ಕಡೆ ತಲೆಹಾಕಲೇ ಇಲ್ಲ. ಆಮೇಲೆ ನೋಡಿದ್ರೆ, ತಿಂದುಮಿಕ್ಕಿದ್ದ ಎತ್ತಿನ ಸುತ್ತ ಎಲ್ಲರೂ ಬಿದ್ಕೊಂಡಿದ್ರು. ಹೆಂಡದ ಖಾಲೀ ಪೀಪಾಯಿ ಸುತ್ತಲೂ ಮಲಗಿರೋ ಕುಡುಕರ ಹಾಗೆ.
ಆಗಲೇ ಇರಬೇಕು. ನಾನು, ಚಕ್ರವರ್‍ತಿಗಳನ್ನು ನೋಡಿದೆ. ನಿಜವಾಗಲೂ. ಅರಮನೆಯ ಕಿಡಕಿ ಹಿಂದೆ ನಿಂತಿದ್ರು. ಹೀಗೆ ಹೊರಗಡೆ ಬರೋದು, ಬಹಳ ಬಹಳ ಅಪರೂಪ. ಸದಾ ಅರಮನೆಯೊಳಗಿನ ಉದ್ಯಾನವನದಲ್ಲೇ ಕಾಲ ಕಳೀತಾರೆ. ಇವತ್ತು ಯಾಕೋ ಬಂದಿದ್ರು ಅಥವಾ ನನಗೆ ಹಾಗೆ ಅನ್ನಿಸಿರಬೇಕು. ಕಿಡಕಿಯಲ್ಲಿ ನಿಂತುಕೊಂಡು, ಮುಂದೆ ಬಾಗಿ, ತನ್ನ ಅರಮನೆಯ ಸುತ್ತಲಿನ ಈ ವಿದ್ಯಮಾನಗಳನ್ನು ಗಮನಿಸ್ತಾ ಇದ್ರು.
"ಇನ್ನು ಮುಂದೆ ಏನಾಗತ್ತೆ?" ಅಂತ, ನಾವೆಲ್ಲರೂ ಕೇಳಿಕೊಳ್ತೀವಿ. "ಈ ಹೊರೆಯನ್ನು, ಈ ಹಿಂಸೆಯನ್ನು ಎಷ್ಟು ದಿನ ತಡ್ಕೊಳ್ಳೊಕೆ ಸಾಧ್ಯ? ಈ ಅಲೆಮಾರಿಗಳು ಇಲ್ಲಿಗೆ ಬರೋದಕ್ಕೆ, ಚಕ್ರವರ್‍ತಿಗಳ ಅರಮನೆಯೇ ಕಾರಣ. ಆದರೆ, ಅವರನ್ನು ಹಿಂದಕ್ಕೆ ಅಟ್ಟೋದು ಹೇಗೆ ಅಂತ ಅವರಿಗೆ ಗೊತ್ತಿಲ್ಲ. ಅರಮನೆಯ ಬಾಗಿಲು ಯಾವಾಗಲೂ ಮುಚ್ಚಿರತ್ತೆ. ರಾಜವೈಭವದಿಂದ, ಹೊರಗೆ ಒಳಗೆ ತಿರುಗಾಡ್ತಿದ್ದ ಕಾವಲುಗಾರರು, ಈಗ ಮುಚ್ಚಿದ ಮುಚ್ಚಿದ ಕಿಡಕಿಗಳ ಹಿಂದೆ ಮರೆಯಾಗಿದಾರೆ. ದೇಶವನ್ನು ಕಾಪಾಡಿಕೊಳ್ಳುವ ಹೊಣೆ, ನಮ್ಮಂತಹ ಚಿಕ್ಕಪುಟ್ಟ ವ್ಯಾಪಾರಿಗಳ ಮೇಲೆ, ಕೆಲಸಗಾರರ ಮೇಲೆ ಬಿದ್ದಿದೆ. ನಮಗೆ ಅಂಥ ಕೆಲಸ ಮಾಡೋ ಶಕ್ತಿ ಇಲ್ಲ. ನಮಗೆ ಅದು ಸಾಧ್ಯ ಅಂತ ನಾವು ಹೇಳಿಯೂ ಇಲ್ಲ. ಇಲ್ಲಿ ಏನೋ ತಪ್ಪು ತಿಳಿವಳಿಕೆ ಇದೆ. ಇದರಿಂದ ನಾವೆಲ್ರೂ ನಾಶವಾಗ್ತೀವಿ."    
ಫ್ರಾಂಜ್ ಕಾಫ್ಕಾ, ೧೯೧೭






Monday, August 27, 2012

'Preethi Mruthyu Bhaya' -A review of Prof U.R.Ananthamyrthy's novel, (Published in 'The Hindu' on 24-08-2012')


Preethi Mruthyu Bhaya

The publication of this novel, written in 1959 and resurrected accidentally has generated considerable interest among the cognoscenti, because of its historical significance as well as its contemporary relevance, even though the former would be restricted to academics. The introductory remarks by the author describe the novel as a creative attempt aimed at purgation from the trauma caused by intense experiences such as death and love as also the emotional and intellectual responses released by them. It delineates the journeys undertaken by Shekhara into his past and the inner recesses of his psyche. It deals also with the alienation of the protagonist from his social and familial moorings; it interrogates his relationship with Shyamala – is it physical, is it ideological or is it love itself. However, this oft repeated theme acquires an added dimension because the novelist perceives the problem as cutting across generations and cultural idiosyncrasies.
Ananthamurthy, among the most important writers of our times, has maintained a critical distance from the protagonist. This is the portrayal of a predicament rather than a worldview. Shekhar’s inability to understand the inner compulsions of other characters and the consequent intolerance should be perceived as lacunae introduced by the novelist himself. The interface that is created among primal forces such as love, death and fear leads to the evolution of Shekhar’s psyche. The sudden death of his younger brother propels him to transcend his limitations and make the ‘right’ choices. He feels that his relatives and friends are denied this privilege because they are sentimental and exploitative. This of course is typical of the Navya (Modernist) writing.
Hatred and intolerance often borne by ‘sensitive’ persons towards an ‘insensitive’ world result in various reaction patterns such as renunciation, struggle, masochism, compromise, resignation and unwilling participation. Shekhara exhibits all of them at various junctures in the novel. His self righteousness is tempered by an untold respect for others and a genuine awareness of his limitations. Surprisingly, his ire is directed more at his mother and other women in his life, rather than male characters with whom he vibes reasonably well. Most of these characters serve a functional purpose – they foster the evolution of Shekhara.
The novel employs the stream of conscious technique with certain modifications. Chronological narration makes way for discrete units of experience that are held together by emotional and cerebral continuum created in the protagonist. The novel may not satisfy your artistic expectations, but its disarming honesty and intensity captivates the reader.
This novel is historically important for two reasons. Firstly, it contains within itself the birth pangs of the modernist fiction in Kannada. It illustrates the process of transition from the realistic modes of structuring and narration to the modernist mode which is characterised by panache for poetic quality, foregrounding the narrative and relegating the story to the background, and being richly symbolic.
Secondly, this novel contains many major preoccupations of Anathamurthy’s oeuvre in their embryonic form. This represents a stage at which the individual and the family are at the nucleus and society forms a peripheral backdrop. Later on, Ananthamurthy focused on the philosophical and socio-political dimensions of life, although never at the cost of sacrificing the sanctity of individuals. In celebrated classics such as “Samskara’ and “Avasthe’, an artistic merger of these concerns is manifested very competently and artistically. The intellectual positions taken in this novel are genuine because the author was bothered neither by a desire to be politically right nor by inner compulsions to cater to the reading public. The fact that the novel ends rather abruptly may also indicate the tentative nature of author’s ideological positions at that temporal juncture.
However, the significance of this work lies in the fact that it reflects on the angst indigenous to youth. However, the travails undergone by other age groups, as furtherance to what sets in during youthful years are given ample representation. It creates a sombre and contemplative mood in its readers. It could become a perennial favourite, it is sure to evoke similar responses in decades to come because it addresses issues that are relevant for all time.

                                                                                      H.S. Raghavendra Rao  
This is a review of Prof U.R. Ananthamurthy's latest novel, published on 24-08-12 in ‘The Hindu’  

Wednesday, August 8, 2012

ಜೀವನಾನಂದದಾಸ್ ಅವರ ಕವಿತೆಗಳು


ಬಂಗಾಳೀ ಭಾಷೆಯ ಹಿರಿಯ ಕವಿ ಜೀವನಾನಂದದಾಸ್(1899-1954) ಅವರ ಮೂರು ಕವಿತೆಗಳ ಅನುವಾದಗಳನ್ನು ಇಲ್ಲಿ ಕೊಟ್ಟಿದ್ದೇನೆ. ಇವರು ಸರಿಸುಮಾರು ನಮ್ಮ ಬೇಂದ್ರೆ ಮತ್ತು ಕುವೆಂಪು ಅವರ ಸಮಕಾಲೀನರು. ಬಹು ಮುಖ್ಯವಾದ ಕವಿತೆಗಳನ್ನು ಬರೆದವರು. ನಾನು ಈ ಅನುವಾದಗಳನ್ನು ಮಾಡಿ ದಶಕಗಳೇ ಕಳೆದವು. ಮೊದಲಸಲ ಇಲ್ಲಿ ಕೊಡುತ್ತಿದ್ದೇನೆ.

ನೀಲಿಮ ಗಗನ ವಿತಾನ
       
        ಹೊಳೆಬೆಳಕನು ತುಳುತುಳುಕುವ ಉದಯದ ಮುಗಿಲೇ,
        ನಡು ಇರುಳಿನ ಕಡುನೀಲಿಯೆ, ಕೊನೆಯಿಲ್ಲದ ಚೆಲುವೆ
        ಮರಮರಳಿಯು ನೀ ಕಾಣುವೆ ಈ ನಗರದ ಮೇಲೆ
        ಗತಿಯಿಲ್ಲದ ಈ ನಗರದ ಸೆರೆಗೋಡೆಯ ಮೇಲೆ

        ಇಲ್ಲಿ ಹರಿಯುವುದು ಹೊಗೆಹಾವಿನ ನುಲಿನುಲಿಯುವ ನೀಲಿ
        ಅನ್ನವು ಬೇಯುವ, ಒಡಲಬೇಗೆಗಳ ಸುಡುಬೆಂಕಿಯ ಬೇಲಿ
        ಮರುಭೂಮಿಯ ಬಿಸಿಯುಸಿರಲಿ ಮಿಂದಿಹ ಕೆಂಗಲ್ಲು
        ಅದಕಿರುವುದು ಬಿಸಿಲ್ಗುದುರೆಯ ಇಲ್ಲದ ನೀರ್‌ಚೆಲ್ಲು
       
        ಹುಡುಕುವ ತಡಕುವ ಬಿಡುಗಡೆ ಕಾಣದ ಯಾತ್ರಿಕ ಹೃದಯ
        ಕಾಲನು ಕಟ್ಟಿಹ ಸಂಪ್ರದಾಯಗಳ ಬೇಡಿಗೆ ಇಲ್ಲ ದಯ
        ಎವೆ ಮಿಟುಕದ ನೀಲಾಗಸವೇ, ಮಾಂತ್ರಿಕ ನೀನು
        ಮಾಂತ್ರಿಕದಂಡದಿ ಒಡೆದು ತೆಗೆದಿರುವೆ ಈ ಜೈಲಿನ ಬಾಗಿಲನು

        ಈ ಜನಗಳ ಈ ಗಲಭೆಯ ನಡುವೆಯೆ ನಾ ಮೌನಿ
        ನೀ ಹೆಣೆದಿಹ ಮಾಂತ್ರಿಕಬಲೆ ಗುಟ್ಟುಗಳದೆ ಧ್ಯಾನಿ
        ಯಾವುದೊ ದೂರದ ನಿಗೂಢ ತಾಣದಿ ಬಲೆ ಹೆಣೆಯುವೆ ಜಾಣ
        ವಾಸ್ತವಲೋಕದ ರಕ್ತಿಮ ದಡಕ್ಕೆ ನಿನ್ನಯ ಆಗಮನ.

        ಹರಳು ಬೆಳಕುಗಳ ಹರಹಿನ ಮೇಲಕೆ ನಿನ್ನ ನೀಲಿ  ಹೊದಿಕೆ
        ಮಾತನೆ ಮರೆತಿಹ ಕನಸಿನ ನವಿಲಿನ ರೆಕ್ಕೆಯು ಸಮ ಅದಕೆ
        ಕಿರಾತಖಂಡಿತ ಧರೆರಕ್ತದ ಕಲೆ ಮರೆತಿವೆ ಕಣ್ಣು
        ಕಡೆಯಿಲ್ಲದ ಬಾನಿನ ಕಡೆ ನೆಗೆದಿದೆ ದೀಪದ ಹೂಕಣ್ಣು

        ಗಳಿತ ವಸ್ತ್ರಗಳ ಪಲಿತ ಮುಂಡಗಳ ಭಿಕ್ಷುಗಳದೆ ಸರಣಿ
        ಹಾದಿಯೊ ನಿಷ್ಕರುಣಿ.
       
        ಸಾಯಲು ನಡೆದಿಹ ಲಕ್ಷ ಲಕ್ಷಜನ ತುಂಬಿದ ಈ ಜೈಲು
        ಕತ್ತಲ ಸುತ್ತಲು ಹೊಗೆಯ ಮುಸುಕಿಹುದು ಈ ಧೂಳು
        ಎಲ್ಲ ಮುಳುಗುವುವು ನೀಲ ನಭದಲ್ಲಿ ಹಲವು ಹತ್ತು ಬಾಳು
        ಸ್ವಪ್ನ ವಿಸ್ತರಿತ, ಭಯ ವಿಹ್ವಲಿತ ಕಣ್ಣಿನ ಮನೆಪಾಲು

        ಚಿಕ್ಕೆಬೆಳಕಿರುವ ಹೊಳೆಯುವ ಬಾನಿನ ಕಡುಬಿಳಿ ಮೋಡಗಳ  ಮಡಿಲೊಳಗೆ
       
        ನಿದ್ದೆಯನರಿಯದ ನವಿರಿನ ಲೋಕವೆ ನಿನ್ನ ಅಂಜುಸ್ಪರ್ಶ
        ಇದೊ ಒಡೆದಿದೆ ಕ್ರಿಮಿಸಮ ಭೂಮಿಯ ಒಣಗಿದ ಕೋಶ.


                                             ಬೇಟೆ

        ಮುಂಜಾನೆ:
        ಆಕಾಶ, ಸೂರ್‍ಯನಕುದುರೆಯ ಕೆಳಹೊಟ್ಟೆಯ ಮೃದುನೀಲಿ,
        ಸುತ್ತಲೂ ಸೀಬೆಯ, ಸೀತಾಫಲದ ಮರಗಳು, ಗಿಳಿಗರಿ ಹಸಿರು
        ಉಳಿದಿರುವ ಒಂಟಿ ತಾರೆ
        ಯಾವುದೋ ಹಳ್ಳಿಯ, ಮದುವೆಮಂಚದ ರತಿಚಕಿತ ಹುಡುಗಿಯ ಹಾಗೆ
        ಅಥವಾ,
        ಸಾವಿರ ಸಂವತ್ಸರದಾಚೆ ಆ ಈಜಿಪ್ಷಿಯನ್ ಹುಡುಗಿ
        ನನ್ನ ನೈಲ್-ನೀಲಿ ದ್ರಾಕ್ಷಾರಸದ ಬಟ್ಟಲಿನಲ್ಲಿ
        ಅದ್ದಿದ ಎದೆ ನಡುವಿನ ಹವಳದ ಹಾಗೆ
        ಹಾಗೆ ಮಿರುಗಿದೆ ಈ ಗಗನದಲ್ಲಿ ಒಂಟಿ ನಕ್ಷತ್ರ.

        ಬಯಲುಸೀಮೆಯಿಂದ ಬಂದ ಕೂಲಿಕಾರರು
        ಶೀತಲ ರಾತ್ರಿಯಲ್ಲಿ ಉರಿಸುತ್ತಿರುವ ಗುಲ್‌ಮೊಹರ್ ಬೆಂಕಿ
        ಇನ್ನೂ ಉರಿಯುತ್ತಿದೆ,
        ಒಣಗಿದ ಅರಳಿಯ ಎಲೆಗಳಿಗೆ ಹೊಸಹೊಸ ಆಕಾರ.
        
        ಸೂರ್ಯನ ಬೆಳಕಿನಲ್ಲಿ ಈಗ, ಅದು ಕುಂಕುಮಕೆಂಪಲ್ಲ.
        ರೋಗಗ್ರಸ್ತ ಪಕ್ಷಿಯ ಹೃದಯದ, ಕರಗುವ ಬಯಕೆಯ ನಸುಹಸಿರು
        ಹಗಲಿನ ಬೆಳಕಿನಲ್ಲಿ ಆಕಾಶ ಮತ್ತು ಮಂಜು ತುಂಬಿದ ಕಾಡುಗಳು
        ಹೊಳೆಯುತ್ತಿವೆ,
        ನವಿಲುರೆಕ್ಕೆಯ ಹಾಗೆ.
         ಮುಂಜಾನೆ:
        ರಾತ್ರಿಯೆಲ್ಲಾ ಒಂದು
        ಚಪಲ ಚಂಚಲ ಕಂದು ಪುರುಷ ಹರಿಣ
        ಓಡಿದೆ, ನೆಗೆದಿದೆ,
        ಸುಂದರಿಯಿಂದ ಅರ್ಜುನ ಅರಣ್ಯದ
        ಚಿಕ್ಕೆಯಿಲ್ಲದ ಕಡುಗಪ್ಪು ರಾತ್ರಿಯಲ್ಲಿ
        ಸಿಕ್ಕಕೂಡದು ಚಿರತೆ ತೆಕ್ಕೆಯಲ್ಲಿ.

        ಅವನ ನಿರೀಕ್ಷೆಯೂ ಈ ಹಗಲಿಗಾಗಿ
        ಅದರ ಬೆಳಕಿನ ಒಡಲು ಅವನ ಹಾದಿ
        ಇಗೊ ಬಂದ
        ಹಸಿ ಹಸಿರು ಹುಲ್ಲುಗರಿ ಹಲ್ಲುಗಳ ನಡುವೆ
        ಹಸಿರು ದ್ರಾಕ್ಷಿಯ ಹಣ್ಣು ಹಸಿರು ಹೀಗೆ
        ಇಗೊ ಅವನು ಬಂದ
        ನದಿನೀರಿನ ಸುಡು ಶೀತಲ ಆಲೆಗಳ ಕಡೆಗೆ
        ಎವೆ ಮುಚ್ಚದೆ ಬಳಬಳಲಿದ ನಸು ಬೆಚ್ಚಿದ,
        ಬೆವರೊಡೆದ ದೇಹವನ್ನು
        ಹರಿಯುವ ಹೊಳೆಯಲಿ ಮುಳುಗಿಸಿ ಮೈಮರೆಯುವ ಕಡೆಗೆ
        ರಾತ್ರಿಯ ರಸರಹಿತ ಶೀತಲ ಗರ್ಭದಿಂದ
        ಹಗಲು ಜಿಗಿಯುವ ರೋಮಾಂಚನಕ್ಕೆ ವಶವಾಗುವ ಬಯಕೆ
        ಈ ನೀಲಿಯ ಕೆಳಗೆ, ಬಂಗಾರದ ಸೂರ್‍ಯಶಲಾಕೆಯಂತೆ ಚಿಮ್ಮಿದರೆ
        ಆ ಶಕ್ತಿಗೆ ಆ ಚೆಲುವಿಗೆ ಆ ಬಯಕೆಗೆ ಮೈಮರುಳು
        ಹರಿಣಿ ಹರಿಣಿ ಹರಿಣಿ.

        ಅಪರಿಚಿತ ಸದ್ದು.
        ನದಿಯ ನೀರು ಹಾಲವಾಣದ ಹೂಕೆಂಪು
        ಮತ್ತೊಮ್ಮೆ ಬೆಂಕಿಕಿಡಿ ಸಿಡಿತ
        ಬಿಸಿಬಿಸಿ ಬಡಿಸಿದ ಜಿಂಕೆಯ ಮೈಮಾಂಸ
       
        ನಕ್ಷತ್ರಗಳ ಕೆಳಗೆ, ಹುಲ್ಲುಹಾಸಿನ ಮೇಲೆ
        ಹಳೆಯ ಬೇಟೆಗಳ ಮಂಜುಮರೆ ಕಥೆಗಳು,
        ಸಿಗರೇಟಿನ ಹೊಗೆ,
        ಅನೇಕ ಮನುಷ್ಯರು, ನೀಟಾಗಿ ತೆಗೆದ ಬೈತಲೆ.
        ಅಲ್ಲಿ ಇಲ್ಲಿ ಬಂದೂಕುಗಳು.
        ಶಾಂತ, ಶೀತಲ, ಅಳುಕಿಲ್ಲದ ನಿದ್ದೆ.
                                                ಮೂಲ ಬಂಗಾಳಿ: ಜೀವನಾನಂದ ದಾಸ್(೧೮೯೯-೧೯೫೪)
                                                ಇಂಗ್ಲಿಷ್ ಅನುವಾದ: ಕ್ಲಿಂಟನ್ ಬಿ. ಸೀಲಿ
                                                         



ಶಿಬಿರದಲ್ಲಿ.....

                                                                                                                                                                               
        ಇಲ್ಲಿ, ಈ ಕಾಡಿನಂಚಿನಲ್ಲಿ ನನ್ನ ಟೆಂಟ್ ಮತ್ತು ನಾನು.
        ರಾತ್ರಿಯೆಲ್ಲಾ ಬಿಡದೆ, ತೆಂಕಣಗಾಳಿಯ ತಂಪು ತೆಕ್ಕೆಯಲ್ಲಿ
        ಬೆಳುದಿಂಗಳ ಒಡಲಿನಲ್ಲಿ
        ಎಡೆಬಿಡದೆ ಕೇಳಿಸಿದೆ ಬೆದೆ ಬಂದ ಜಿಂಕೆಯ ಕೂಗು
        ಅವಳು ಕರೆಯುವುದು ಯಾರಿಗಾಗಿ?

        ಈ ರಾತ್ರಿ ಎಲ್ಲೋ ಜಿಂಕೆಗಳ ಬೇಟೆ ನಡೆಯುತ್ತದೆ.
        ಈ ದಿನ ಬೇಟೆಗಾರರು ಕಾಡಿನೊಳಹೊಕ್ಕರು.
        .....ಅವುಗಳ ವಾಸನೆ ಹಿಡಿಯಲೆಂದು.
        ಇಲ್ಲಿ ನಾನು ಹೀಗೆ ಮಲಗಿದ್ದೇನೆ ಹಾಸಿಗೆಯ ಮೇಲೆ
        ನಿದ್ದೆಯ ಸುಳಿವೂ ಇಲ್ಲ
         ಈ ರಾತ್ರಿ, ವಸಂತದಲ್ಲಿ
       
        ಎಲ್ಲೆಲ್ಲೂ ಕಾಡಿನ ಬೆರಗು       
        ಬೆಳುದಿಂಗಳ ರುಚಿ ತುಂಬಿದ
        ವೈಶಾಖದ ಗಾಳಿ
        ಬೆದೆಹದದ ಜಿಂಕೆದನಿ ಇರುಳ ತುಂಬಾ.
        ನಡುಕಾಡಿನೊಡಲೊಳಗೆ
        -ಬೆಳುದಿಂಗಳ ನಿಲುಕಿನಾಚೆ-
        ಹರಿಣಗಳ ಕಿವಿ ನಿಗುರು ರೋಮ ನಿಮಿರು.
        ಅವಳ ಇರವನು ತಿಳಿದು,
        ಚಲಿಸಿದವು ಹರಿಣ.
       
        ಈಗ, ಈ ಬೆರಗು ತುಂಬಿದ ಇರುಳಿನಲ್ಲಿ
        ಬಂದಿದೆ ಅವುಗಳ ರತಿಸಮಯ
        ಕರೆಯುತ್ತಿದೆ ಗೆಳತಿಯ ಹೃದಯ.
        ಕಾಡಿನ ಮುಸುಕಿನ ಬೆಳುದಿಂಗಳ ನಸುಕಿನ ಅಭಯ.
        ದಾಹ ತೀರಿಸಿಕೊ, ಮೂಸು, ಮೈಕವಿ, ಸವಿ
        ವ್ಯಾಘ್ರಭಯರಹಿತ ಎನುವಂತೆ ಈ ರಾತ್ರಿ ನಮ್ಮದಿದು ಅಡವಿ.
       
        ಹರಿಣಗಳ ಹೃದಯ, ಈ ರಾತ್ರಿ ನಿರ್ಭಯ
        ಆತಂಕ ತಳ್ಳಂಕ ಇಲ್ಲ ಈ ತನಕ.
        ಇರುವುದೊಂದೇ ಒಂದು, ದಾಹ
        ಏನೆಂಥ ಮೈಪುಲಕ ಆಹ!
       
        ಚಿರತೆಗಳ ಎದೆಯಲ್ಲು ಇರಬಹುದು ರೋಮಾಂಚನ
        ಹರಿಣಿಚೆಲುವಿನ ಬೆರಗು ತುಂಬಿರುವ ನಯನ.
        ಕಾಮ ಕೆರಳುತ್ತದೆ, ಬಯಕೆ ಅರಳುತ್ತದೆ, ಕನಸು ಚಿಮ್ಮುತ್ತವೆ ಈ ರಾತ್ರಿ
        ಸುಗ್ಗಿ ತುಂಬಿದ ವನದ ಧಾತ್ರಿ.
       
        ಒಂದು, ಇನ್ನೊಂದು, ಅಗೊ ಅಗೊ ಮತ್ತೊಂದು, ಕಾಡು ಸೀಳುತ ಬಂತು ಜಿಂಕೆ ಸರಣಿ
        ನೀರ ಸಪ್ಪಳ ಹಿಂದೆ, ಬೇಕೀಗ ತರುಣಿ, ಬೆದೆ ಮರುಳು ಹರಿಣಿ.
        ಹಲ್ಲು ಮರೆತು, ಉಗುರು ಮರೆತು ಎಲ್ಲ ಮರೆತು ಅವಳ ಹೊರತು
        ಜೊನ್ನದಲ್ಲಿ ಮಿಂದು ಬಂದ ಸುಂದರಿ ನದಿ ಕುರಿತು.
        ಗಂಡು ಚಲಿಸುವಂತೆ ತನ್ನ ಉಪ್ಪುಹುಡುಗಿ ಕಡೆಗೆ,              
        ಬಂದವು ಈ ಜಿಂಕೆ.

        ಇಗೊ ನನಗೆ ವೇದ್ಯ:
        ಅವುಗಳ ಗೊರಸುಗಳ ನೂರು ದನಿ,
        ಹೆಣ್ಣು ಜಿಂಕೆಯ ಬೆದೆನರಳು ದನಿ,
        ನಾನಿನ್ನು ನಿದ್ರಿಸಲಾರೆ.
        ಇಲ್ಲಿ ಮಲಗಿರುವಂತೆ, ಅಲ್ಲಿ ಗುಂಡಿನ ಸದ್ದು
        ಮತ್ತೆ ಅದೊ ಕೇಳುತಿವೆ, ಭಯಚಕಿತ ಸದ್ದು.
        ಬೆಳುದಿಂಗಳ ನಡುವೆ, ಆ ಹರಿಣಿ ಇನ್ನೊಮ್ಮೆ ಕರೆದಿದೆ
        ನಾನಿಲ್ಲಿ ಬಿದ್ದಿರುವೆ ಒಂಟಿಯಾಗಿ.

        ಬಂದೂಕುಗಳ ಗುಡುಗು ಕೇಳಿದಾಗ
        ಹೆಣ್ಣು ಜಿಂಕೆಯ ಕೊರಳು ಕೂಗಿದಾಗ
        ನನ್ನ ಹೃದಯವನ್ನು ದಣಿವು ತುಂಬುತ್ತದೆ.

        ನಾಳೆ ಅವಳು ಮರಳುತ್ತಾಳೆ
        ಇರುಳಿಲ್ಲದ ಹಗಲಿನಲ್ಲಿ ಕಾಣುತ್ತಾಳೆ
        ಅವಳ ಸುತ್ತಲು ಸತ್ತ ಪ್ರಿಯತಮರ ಹೆಣರಾಶಿ.
        ಮನುಷ್ಯರು ಅವಳಿಗೆ ಇದನ್ನೆಲ್ಲ ಕಲಿಸಿದ್ದಾರೆ.

Monday, July 30, 2012

ಅನುಭವ ಮತ್ತು ತಲ್ಲೀನತೆ


ಕಣ್ತಪ್ಪಿನಿಂದ ಡಿಲೀಟ್ ಆಗಿದ್ದ ಈ ಬರವಣಿಗೆಯನ್ನು ಮತ್ತೆ ಇಲ್ಲಿ ಪ್ರಕಟಿಸಿದ್ದೇನೆ -ಎಚ್.ಎಸ್.ಆರ್.
ಅನುಭವ ಮತ್ತು ತಲ್ಲೀನತೆ
ಇದು ಕೂಡ, ನಮ್ಮೆಲ್ಲರನ್ನೂ ಕಾಡಿರಬಹುದಾದ ಉತ್ತರವಿಲ್ಲದ ಪ್ರಶ್ನೆ. ಯಾವುದೇ ಸಂಗತಿಯನ್ನು ತೀವ್ರವಾಗಿ ಅನುಭವಿಸುವುದಕ್ಕೂ ಅದನ್ನು ಕುರಿತು ಆಲೋಚಿಸುವುದಕ್ಕೂ ಇರುವ ಸಂಬಂಧದ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಅವು ಕಣ್ಣು, ಕಿವಿ, ಮೂಗು, ಚರ್ಮ ಮುಂತಾದ ಇಂದ್ರಿಯಗಳಿಂದ ಪಡೆಯುವ ಹಲವು ಬಗೆಯ ಅನುಭವಗಳಿರಬಹುದು ಅಥವಾ ಇವುಗಳಾಚೆಗೆ ಇದೆ ಎನ್ನಲಾದ ಮಾನಸಿಕವಾದ, ಭಾವನಾತ್ಮಕವಾದ ಕೆಲವೊಮ್ಮೆ ಅತೀಂದ್ರಿಯವೆಂದೂ ಕರೆಯಲಾಗುವ ಅನುಭವಗಳೇ ಇರಬಹುದು.  ಸಂಗೀತದ ಹಾಗೆ ಒಂದೇ ಒಂದು ಇಂದ್ರಿಯಕ್ಕೆ ಗೊತ್ತಾಗುವ ನೇರ ಅನುಭವ ಇರಬಹುದು ಅಥವಾ ಹಲವು ಇಂದ್ರಿಯಗಳ ಅನುಭವಗಳು ಸಂಕೀರ್ಣವಾಗಿ ಕಲೆತಿರುವ ಕೂಡುಅನುಭವ ಆಗಿರಬಹುದು. ಉದಾಹರಣೆಗೆ, ಗಂಡು-ಹೆಣ್ಣು ಕೂಡಿ ಪಡೆಯುವ ಅನುಭವವು ಎಲ್ಲ ಇಂದ್ರಿಯಗಳ ಕಟು-ಮಧುರ ಅನುಭವಗಳ ಸಂಕೀರ್ಣ ಹೆಣಿಗೆಯಲ್ಲವೇ? ನಾವು ನಮ್ಮ ವ್ಯಕ್ತಿತ್ವದ ಗಡಿಗೆರೆಗಳನ್ನು ದಾಟಿ, ಬೇರೊಂದರಲ್ಲಿ, ಕಳೆದುಹೋಗುವ ಆ ಪರಿ ಈ ಲೋಕದ ಎಷ್ಟು ಜನರಿಗೆ ಎಷ್ಟು ಬಾರಿ ಆದೀತು? ಬಹಳ ಬಹಳ ಅಪರೂಪ.
ನಮ್ಮ ಬಾಲ್ಯಾನುಭವಗಳ ಲೋಕದ ಮರುಕಳಿಕೆಯೂ ಹಾಗೆಯೇ. ಅವು ಮೂಡುವುದು ಇಂದ್ರಿಯಗಳ ಅನುಭವದ ಮರುಸೃಷ್ಟಿಯಾಗಿಯೋ ಅಥವಾ ಅವುಗಳನ್ನು ಮಾತುಗಳಲ್ಲಿ ಕಟ್ಟಿರುವ ನೆನಪು ಆಗಿಯೋ ನೀವೇ ಹೇಳಿ. ಆ ನೆನಪುಗಳನ್ನು ಬೇರೆಯವರಿಗೆ ಹೇಳಿದಾಗ ಅಲ್ಲ, ಸ್ವತಃ ನಾವೇ ಒಳಗಿನಿಂದ ಹೊರಗೆ ತಂದುಕೊಂಡಾಗ ನಿಜಕ್ಕೂ ಏನಾಗುತ್ತದೆ. ನಿಮಗೂ ಗೊತ್ತು. ಈಗ ಮೂಸುವ ಯಾವುದೋ ಗಂಧ, ಕೇಳುವ ಯಾವುದೋ ನಾದ, ಕಳೆದ ಅನುಭವಗಳ ಲೋಕಕ್ಕೆ ಲಗ್ಗೆಹಾಕಿ, ಮರೆತು ಮಲಗಿದ್ದ ಯಾವುದೋ ಲೋಕವನ್ನು ಮತ್ತೆ ಹುಟ್ಟಿಸುತ್ತದೆ. ಇಂಥ ಅನುಭವಗಳು ಎಲ್ಲಿ ಸ್ಟೋರ್ ಆಗಿರುತ್ತವೆ? ನಮ್ಮ ಮೆದುಳಿನಲ್ಲಿ ಬೇರೆ ಬೇರೆ ಇಂದ್ರಿಯಗಳ ಅನುಭವದ ದಾಖಲಾತಿ ಮತ್ತು ಸಂಗ್ರಹಕ್ಕೆಂದು ಮೀಸಲಾಗಿರುವ, ಜಾಗಗಳಲ್ಲಿಯೋ ಅಥವಾ ಭಾಷಿಕ ನೆನಪುಗಳ ಭಂಡಾರವೊಂದು ಇದೆಯೋ. ನಾವು ಯಾವಾಗಲೂ ಅನುಭವಗಳನ್ನು ಭಾಷೆಗೆ ಅನುವಾದ ಮಾಡಿಕೊಳ್ಳುತ್ತಿರುತ್ತೇವೆಯೇ?   
ಅದಿರಲಿ, ಈ ರೀತಿಯ ಅನುಭವಗಳನ್ನು ಪಡೆಯುವಾಗ ನಮ್ಮ  ಮೈ, ಮನಸ್ಸು ಮತ್ತು ಪ್ರಜ್ಞೆಗಳ ನಡುವಿನ ಸಂಬಂಧ ಹೇಗಿರುತ್ತದೆ ಎಂಬುದು ನಾನು ಇಲ್ಲಿ ಹುಡುಕುತ್ತಿರುವ ವಿಷಯ. ಅನುಭವದ ತೀವ್ರತೆಯನ್ನು ಹೇಳುವಾಗ, ತಲ್ಲೀನವಾಗುವುದು, ಮೈಮರೆಯುವುದು ಎಂಬ ಪದಗಳನ್ನು ನಾವು ಬಳಸುತ್ತೇವೆ. ನಿಜಕ್ಕೂ ಮರೆಯಬೇಕಾದ್ದು ಮನವನ್ನೋ ಮೈಯನ್ನೋ? ಕುವೆಂಪು ಅವರು ತಮ್ಮ ಹಸುರು ಎಂಬ ಕವಿತೆಯಲ್ಲಿ ಹೀಗೆ ಹೇಳುತ್ತಾರೆ:
ಹಸುರಿತ್ತಲ್ ಹಸುರತ್ತಲ್
ಹಸುರೆತ್ತಲ್ ಕಾಡಿನಲಿ
ಹಸುರಾದುದೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ            
ಎಂದು ಬರೆಯುತ್ತಾರೆ. ಅಂತೆಯೇ ಗಗನವನ್ನು ಮೈನೀಲಿಗಟ್ಟುವವರೆಗೆ ನೋಡಬೇಕೆಂದು ಹೇಳುತ್ತಾರೆ. ಇಂಗ್ಲಿಷ್ ಕವಿಯಾದ ಎಜ್ರಾ ಪೌಂಡ್ ಕೂಡ,
        ‘I stood still and was a tree amid the wood'
ಎನ್ನುತ್ತಾನೆ. ಹೀಗೆ ಅನುಭವದಲ್ಲಿ ಮೈಮರೆತಿರುವಾಗ ನಮ್ಮ ಮನಸ್ಸು ಏನು ಮಾಡುತ್ತಿರುತ್ತದೆ ಎನ್ನುವುದು ಮುಖ್ಯವಾದ ಪ್ರಶ್ನೆ. ಅದು ಆಲೋಚನೆಯಲ್ಲಿ ತೊಡಗಿರುವುದೇ? ತೊಡಗಿರಬೇಕೇ, ಆ ಅನುಭವನ್ನೇ ಕುರಿತು, ಆಗಲೇ ಯೋಚಿಸತೊಡಗಿದರೆ, ಅನುಭವದ ತೀವ್ರತೆಗೆ ಭಂಗ ಬರುತ್ತದೆಯೇ? ಆ ಅನುಭವವನ್ನು ಕುರಿತ ಹಾಗೆ ನಮ್ಮ ಮನಸ್ಸಿನಲ್ಲಿ ಅದುವರೆಗೆ ಮನೆಮಾಡಿದ್ದ ವಿಚಾರಗಳು, ಪೂರ್ವಾಗ್ರಹಗಳು, ಭಯಗಳು ಮತ್ತು ಆತಂಕಗಳು ಅನುಭವದ ಸ್ವರೂಪವನ್ನು ಬದಲಿಸುವುದಿಲ್ಲವೇ. ಸ್ವ-ಪ್ರಜ್ಞೆ ಎನ್ನುವುದೇ ತಲ್ಲೀನತೆಯ ಶತ್ರುವಾಗಿಬಿಡುವುದೆ? ಅಂತಹ ಪ್ರಜ್ಞೆಯಿಲ್ಲದ ಪ್ರಾಣಿಗಳ ಅನುಭವವು ಮನುಷ್ಯರದಕ್ಕಿಂತ ತೀವ್ರವೇ. ಭೂತಕಾಲ ಮತ್ತು ಭವಿಷ್ಯತ್ ಕಾಲಗಳ ಬಗ್ಗೆ ನಮಗಿರುವ ತಿಳಿವಳಿಕೆಯೇ ಅನುಭವದ ಸವಿಯನ್ನು ಹಾಳುಮಾಡುತ್ತದೆಯೇ? ಅನುಭವ ಆಗಿಹೋದ ನಂತರ, ಅದರ ಬಗ್ಗೆ ಆಲೋಚನೆ ಮಾಡುವುದು ಬೇರೆ. ಅನುಭವವನ್ನು ಪಡೆಯುತ್ತಿರುವಾಗಲೇ ಅದರ ಬಗ್ಗೆ ಆಲೋಚನೆ ಮಾಡುವುದು, ಮಾತನಾಡುವುದು ಬೇರೆ. ಕೆಲವರಂತೂ ಆಹಾ, ಎಷ್ಟು ಚೆನ್ನಾಗಿದೆ! ಎಂದು ಅನುಭವಕ್ಕೆ ಮಾತಿನ ಸರ್ಟಿಫಿಕೇಟ್ ಕೊಡುತ್ತಿರುತ್ತೇವೆ. ಬೇರೆ ಕೆಲವರು ಕಂಡುದನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯುವ ಹಪಹಪಿಯಲ್ಲಿ ಮುಳುಗಿಹೋಗಿ ಅನುಭವದ ಕ್ಷಣಗಳನ್ನೇ ಕಳೆದುಕೊಳ್ಳುತ್ತಾರೆ. ಇದೆಲ್ಲವೂ ಅನುಭವಗಳಿಂದ ಮಾಡುವ ಪಲಾಯನವೇ ಅಲ್ಲವೇ?      
ನಾವು ಮನಮರೆತು ಮೈನೆಲೆಯಲ್ಲಿ ಮಾತ್ರ ಅನುಭವ ಪಡೆಯುವುದು ಸಾಧ್ಯವಾದರೆ ಏನಾಗುತ್ತದೆ? ಈ ಸ್ಥಿತಿಯನ್ನು ಕುಮಾರವ್ಯಾಸನು ಅದ್ಭುತವಾಗಿ ಹೇಳಿದ್ದಾನೆ. ಶಾಪಗ್ರಸ್ತನಾಗಿ ಕಾಡಿನಲ್ಲಿದ್ದ ಪಾಂಡುರಾಜನು ಮಾದ್ರಿಯ ರೂಪಕ್ಕೆ ಮರುಳಾಗಿ ಶಾಪದ ಸಂಗತಿಯನ್ನೇ ಮರೆತು ಅವಳನ್ನು ಕೂಡುತ್ತಾನೆ. ಆಗಿನ ಅವನ ಸ್ಥಿತಿಯನ್ನು ಕವಿಯು ಪ್ರಜ್ಞೆ ಜಾನ್ವಂಘ್ರಿಕಟಿ ಪರಿಮಿತವಾಯ್ತು ಎಂದು ವರ್ಣಿಸುತ್ತಾನೆ. (ಪ್ರಜ್ಞೆಯು ಮೊಣಕಾಲು, ಕಾಲು ಮತ್ತು ಸೊಂಟಗಳಿಗೆ ಸೀಮಿತವಾಯಿತು.) ಶಾಪದ ಭಯವಿಲ್ಲದಾಗಲೂ ಸಂಭೋಗದ ಸುಖವು ಈ ರೀತಿಯ ತಲ್ಲೀನತೆಯನ್ನು ಅವಲಂಬಿಸುತ್ತದೆಯೇ? ಆಗ ವ್ಯಕ್ತಿಗೆ ತನ್ನ ಜೊತೆಗಾತಿ/ಜೊತೆಗಾರ ಜೀವಗಳ ಬೇಕುಬೇಡಗಳ ಬಗೆಗಿನ ಆಲೋಚನೆ ಇರುವುದೇ, ಇರಬೇಕೇ, ಇರಬಾರದೇ. ಅಥವಾ ಅದು ನಾನು-ನೀನು ಎಂಬ ಪರಸ್ಪರ ವ್ಯತ್ಯಾಸವೇ ಅಳಿದುಹೋದ ಒಂದುತನದ ಸ್ಥಿತಿಯೋ? ಆಗ ಬೇಂದ್ರೆಯವರು ಹೇಳಿದ ಹಾಗೆ ಇಬ್ಬರಿಗೂ ನಾಲ್ಕು ಕೈಗಳಿರುತ್ತವೆಯೇ? ಇಂತಹ ಸ್ಥಿತಿಯು, ನಿಜದಲ್ಲಿ ಪಡೆದುಕೊಳ್ಳಬಹುದಾದ ವಾಸ್ತವವೋ ಅಥವಾ ಮಿಂಚಿ ಮಾಯವಾಗುವ ಆದರ್ಶವೋ? ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚು.
ಇದೇ ಮಾತನ್ನು ಬೇರೆ ಅನುಭವಗಳಿಗೂ ಅನ್ವಯಿಸಬಹುದು. ಎಲ್ಲ ಕಡೆಯೂ ಅರಿಯುವಿಕೆ ಮತ್ತು ಇರುವಿಕೆಗಳ ನಡುವಿನ ದ್ವಂದ್ವವು ನಮ್ಮನ್ನು ಕಾಡುತ್ತದೆ. ಯಾವುದೇ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು, ತಿಳಿಯಬೇಕು ಎನ್ನುವ ಒತ್ತಡವೇ, ಅಪೇಕ್ಷೆಯೇ ಇರುವಿಕೆಯ ಸುಖಕ್ಕೆ ಅಡ್ಡಿಯಾಗುತ್ತದೆಯೇ? ಮತ್ತೆ ಕುವೆಂಪು ನೆನಪಾಗುತ್ತಾರೆ. ಅವರು ಪ್ರಾಣಿಗಳಿಗೂ ಮನುಷ್ಯರಿಗೂ ಹೋಲಿಕೆ ಮಾಡುತ್ತಾರೆ. ದನಕರುಗಳು ಸುಮ್ಮನೆ ಮೇಯುತ್ತಿರುತ್ತವೆ. ಅವಕ್ಕೆ ಅರಿಯುವ ಗೋಜು ಇಲ್ಲ. ಮನುಷ್ಯನಿಗೆ ಮಾತ್ರ ಈ ಗೋಜು.
        ನಾ ಮನುಜನು ಎನ್ನೆದೆಯಲ್ಲಿ ಅರಿವೆನ್ನುವ ಬಾವು
          ನೋವಾಗಿರೆ, ಕೀವಾಗಿರೆ ಬಾಳ್ಬೆಲ್ಲವೆ ಬೇವು..
          ಅರಿವಾಸೆಯ ಬಿಡು ಇರುವಾಸೆಯ ತೊಡು
          ಅರಿವಾಸೆಯೆ ಮಾಯಾಬಂಧ, ಇರುವುದೆ ಮುಕ್ತಿಯ ಆನಂದ.
ಆದರೆ, ಹೀಗೆ ಅರಿಯದೆ ಸುಮ್ಮನೆ ಇರುವ ಸ್ಥಿತಿಯು ಸ್ವತಃ ಕುವೆಂಪು ಅವರಿಗಾದರೂ ಸಾಧ್ಯವಾಯಿತೇ? ಹೇಳುವುದು ಕಷ್ಟ.
        ಹಾಗೆ ನೋಡಿದರೆ, ಪಶ್ಚಿಮದ ಕೆಲವು ವಿದ್ವಾಂಸರು ಈ ಬಗ್ಗೆ ಭಿನ್ನವಾಗಿ ಆಲೋಚಿಸಿದ್ದಾರೆ. ಉದಾಹರಣೆಗೆ ಫ್ರಾನ್ಸ್ ದೇಶದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾದ ಡೆಕಾರ್ಟೆಸ್, ಬಹಳ ಪ್ರಸಿದ್ಧವಾದ ‘I think, therefore I am’ ಎಂಬ ಮಾತನ್ನು ಹೇಳಿದ್ದಾನೆ. ನಾನು ಆಲೋಚನೆ ಮಾಡುತ್ತೇನೆ ಎನ್ನುವುದೇ ನಾನು ಬದುಕಿರುವುದಕ್ಕೆ ಸಾಕ್ಷಿ ಎಂದು ಈ ಮಾತಿನ ಅರ್ಥ. ಆಲೋಚನೆ ಮಾಡದವನು ಮನುಷ್ಯನೇ ಅಲ್ಲ ಎಂದು ಅವನ ಅಭಿಪ್ರಾಯ. ನಮಗೂ ಹಾಗೆಯೇ ಅನ್ನಿಸಬಹುದೇ? ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ವ್ಯತ್ಯಾಸವು, ಆಲೋಚನಾಶಕ್ತಿ ಹಾಗೂ ಬುದ್ಧಿಶಕ್ತಿಗಳೇ ಎಂದು ನಾವು ಹೇಳುತ್ತೇವೆ. ಆದರೆ ಬುದ್ಧಿವಂತರೆನಿಸಿಕೊಂಡವರು ತಮ್ಮ ಬದುಕುಗಳನ್ನು ನಿರ್ವಹಿಸುತ್ತಿರುವ ಬಗೆಯು ಶೋಚನೀಯವಾಗಿದೆಯಲ್ಲಾ! ಅದು ಹೋಗಲಿ ಎಂದರೆ, ಈ ಬುದ್ಧಿವಂತರು ಸಮಾಜಗಳ, ದೇಶಗಳ ಬದುಕನ್ನೇ ಅವನತಿಯ ಕಡೆಗೆ ಕರೆದೊಯ್ಯುತ್ತಿರುವರಲ್ಲಾ! ಇಂತಹ ಆಧುನಿಕ ಭಸ್ಮಾಸುರರನ್ನು ಮ್ಯಾನೇಜ್ ಮಾಡುವುದು ಹೇಗೆ? ಯಾರು?
        ಆದ್ದರಿಂದಲೇ ಮನುಷ್ಯನ ನಾಗರಿಕತೆಯ ಬೆಳವಣಿಗೆಯ ದಿಕ್ಕಿಗೂ, ಮನುಷ್ಯನ ಅಂತರಂಗದ ವಿಷಾದಕ್ಕೂ ಹತ್ತಿರದ ಸಂಬಂಧವಿದೆಯೇ ಎಂಬ ಅನಿಸಿಕೆ ಮೂಡುತ್ತದೆ. ನಾವು ಮುಂದಿನ ಹೆಜ್ಜೆಯೆಂದು ಇಟ್ಟಿದ್ದು, ಹಿಂದಿನ ಹೆಜ್ಜೆಯಾಗಿಬಿಟ್ಟಿದೆಯೇ? ನಾವು ಮತ್ತು ನಮ್ಮ ನಾಗರಿಕತೆಯು ವಾಪಸ್ ಹೋಗಲು ಸಾಧ್ಯವಿಲ್ಲದ ಸ್ಥಿತಿಯನ್ನು ತಲುಪಿ ದಶಕಗಳೇ ಕಳೆದಿವೆಯೇ?
        ಮಾತು ಎಲ್ಲಿಂದ ಎಲ್ಲಿಗೋ ಹೋಯಿತು. ಆದರೆ, ಮೂಲ ಪ್ರಶ್ನೆ ಅದೇ? ಬುದ್ಧಿ ಮತ್ತು ಭಾವನೆ ಎರಡೂ ಕೂಡ ಇಂದ್ರಿಯಗಳಿಂದ ಪಡೆಯಬಹುದಾದ ಅನುಭವಗಳ ತೀವ್ರತೆಗೆ ಅಡ್ಡಿಯಾಗುವ ಸಂಗತಿಗಳೇ? ಮನುಷ್ಯ ಮತ್ತು ವಸ್ತುಗಳ ನಡುವಿನ ಸಂಬಂಧಕ್ಕೂ ಮತ್ತು ಮನುಷ್ಯ ಹಾಗೂ ಮನುಷ್ಯರ ಸಂಬಂಧಕ್ಕೂ ಅಂತರ ಇದೆಯೇ. ಉದಾಹರಣೆಗೆ ಮಲ್ಲಿಗೆಯನ್ನು ಮೂಸುವ ಹಾಗೆ, ಜಿಲೇಬಿಯನ್ನು ತಿನ್ನುವ ಹಾಗೆ, ಮನುಷ್ಯರ ಜೊತೆಯಲ್ಲಿಯೂ ವರ್ತಿಸಲು ಸಾಧ್ಯವೇ, ಸಾಧುವೇ? ಕೆಲವರು ಹಾಗೆಯೇ ಇರುತ್ತಾರೆಯೇ. ಭಾವದ ಜೊತೆ ಮತ್ತು ಬುದ್ಧಿಯ ಹಿನ್ನೆಲೆ ಎರಡೂ ಇಲ್ಲದೆ, ಮನುಷ್ಯನಿಗೆ ಏನೂ ದಕ್ಕುವುದಿಲ್ಲ ಎನ್ನುವುದೇ ನಿಜವಾದರೆ, ತಲ್ಲೀನವಾದ, ಸಮಗ್ರವಾದ ಅನುಭವ ಎನ್ನುವುದು ಕೊನೆಗೂ ಬಿಸಿಲುಗುದುರೆಯೇ? ಮನುಷ್ಯನ ವಿಷಾದದ ಮೂಲವು ಇಲ್ಲಿದೆಯೇ? ನಮ್ಮ ಲೋಕದಲ್ಲಿ ಅಲ್ಲ, ಮನುಷ್ಯರಾಗಿ ನಾವು ಲೋಕವನ್ನು ಪಡೆಯುವ ಬಗೆಯಲ್ಲಿಯೇ ಅಸಮಾಧಾನದ, ಅಪೂರ್ಣತೆಯ, ಪ್ಯಾಶನೇಟ್ ಅಗದೆ ಬದುಕುವುದರ ಮೂಲಕಾರಣವೂ ಇದೆಯೇ.
        ಉತ್ತರ ನನಗಂತೂ ಗೊತ್ತಿಲ್ಲ. ಗೊತ್ತಿದ್ದರೆ ನಾನೂ ಮನುಷ್ಯನಾಗದೆ ದೇವರೇ ಆಗಿಬಿಡುತ್ತಿದ್ದೆ.(ಅಂದಹಾಗೆ ಆ ದೇವರುಗಳು ಹೇಗೆ ಇರುತ್ತಾರೆ?) ನಿರ್ಲಿಪ್ತರಾಗಿಯೋ ಅಥವಾ ಭಾವುಕರಾಗಿಯೋ? ಪು.ತಿ.ನ. ಅವರ ಅಹಲ್ಯೆ ನಾಟಕದಲ್ಲಿ ಬರುವ ದೇವತೆಗಳಂತೂ ಯಾವ ಲಜ್ಜೆಯೂ ಇಲ್ಲದೆ,
        ನಿರ್ಜರರಾವೆಮಗೇತರ ಭೀತಿ, ಸತತ ಬಿನದವೇ ನಮ್ಮಯ ರೀತಿ ಎನ್ನುತ್ತಾರೆ. ಮೊದಲಿಳೆಯ ಮಡದಿಯರು ಸಲುವರಮರರಿಗೆ ಎಂದು ಡಿಮ್ಯಾಂಡ್ ಮಾಡುತ್ತಾರೆ. ಮುಪ್ಪಿಲ್ಲದ ರೋಗವಿಲ್ಲದ ಆ ಸ್ಥಿತಿಗೆ ಅಹಂಕಾರ ಮತ್ತು ಆತ್ಮವಿಶ್ವಾಸಗಳೇ ಮೂಲವಾದವು. ಬೇಂದ್ರೆಯವರು ಇದನ್ನು ಅಮೃತದ ತೇಗಿನ ಮದ ಎಂದು ಕರೆದರು. ಮುಪ್ಪು, ರೋಗ, ದೈಹಿಕ ಅಸಮಾನತೆ ಮಾನಸಿಕ ಕುಗ್ಗುವಿಕೆಗಳಿಂದ ತುಂಬಿದ ನಮಗೆ ಸತತ ಬಿನದ (ಕೊನೆಮೊದಲಿಲ್ಲದ ಸಂತೋಷ) ಎನ್ನುವುದು ಸಾಧ್ಯವಿಲ್ಲದ ನಿರೀಕ್ಷೆ. ಹಾಗೆ ನೋಡಿದರೆ, ದೇವತೆ ಎನ್ನುವ ಕಲ್ಪನೆಯೇ ಮನುಷ್ಯರ ಕನಸು ಇರಬೇಕು.
        ನಮಗೆ ಮನುಷ್ಯರಿಗೆ, ಅನುಭವದ ತಣಿಯುವಿಕೆಯು, ಬಾಯಾರಿಕೆಯನ್ನು ಹಿಂಗಿಸುವುದಿಲ್ಲ. ಅದು ಮರಳಿನಲ್ಲಿ ಸುರಿದ ನೀರಿನಂತೆ ಇಂಗಿಹೋಗುತ್ತದೆ. ನಾವು ಮತ್ತೆ ಹೊಸ ಬಾಯಾರಿಕೆಯೊಂದಿಗೆ ಹೊಸ ನೀರಿಗಾಗಿ ಹಾತೊರೆಯುತ್ತೇವೆ. ಸಂಸ್ಕೃತದಲ್ಲಿ ಹೀಗೆ ಹೇಳುತ್ತಾರೆ: ಭೋಗದ ಬಯಕೆಯು ಉಪಭೋಗದಿಂದ ತಣಿಯುವುದಿಲ್ಲ. ನಮ್ಮ ಈ ಕಾಲದಲ್ಲಿ, ಕೊಂಡುಕೊಳ್ಳುವ ದಾಹದೊಂದಿಗೆ, ಒಂದು ಸೂಪರ್ ಬಜಾರಿನಿಂದ ಇನ್ನೊಂದಕ್ಕೆ ತಿರುಗುತ್ತಿರುವ ನಮಗೆ ಈ ಮಾತು ಒಂದು ಪಾಠ.                                     --------------------------